ಮಂಡ್ಯ: ಕೋಳಿಫಾರಂನಲ್ಲಿ ಮಾಂಸದ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡಲು ಯತ್ನಿಸಿದವರನ್ನು ರೈತ ಮರಕ್ಕೆ ಕಟ್ಟಿ ಹಾಕಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕ ಬ್ಯಾಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಗ್ರಾಮದ ರೈತ ಹನುಮಂತೇಗೌಡ ಕೋಳಿಫಾರಂನಲ್ಲಿ ಘಟನೆ ನಡೆದಿದ್ದು, ರೈತ ತಮ್ಮ ಕೋಳಿ ಫಾರಂನಲ್ಲಿ ಸಾಕಿದ ಕೋಳಿಗಳನ್ನು ಮೈಸೂರು ಮೂಲದ ಎನ್ ಆರ್ ಚಿಕನ್ ಕಂಪನಿಯವರಿಗೆ ಮಾರಾಟ ಮಾಡುತ್ತಿದ್ದರು.
ಕಳೆದ ಮೂರ್ನಾಲ್ಕು ತಿಂಗಳಿಂದ ಈ ರೈತನಿಗೆ ಕೋಳಿ ತುಂಬುವಾಗ ವಂಚಕರು ತೂಕದಲ್ಲಿ ಮೋಸ ಮಾಡುತ್ತಿದ್ದರು. ಇಂದು ಅನುಮಾನಗೊಂಡ ರೈತ ಕೋಳಿ ತುಂಬುವಾಗ ರೈತ ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ವೇಳೆ ರೈತನಿಗೆ ಸುಮಾರು 30 KG ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದ ರೈತ ಹನುಮಂತೇಗೌಡ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾರೆ.
ತೂಕದಲ್ಲಿ ಮೋಸ ಮಾಡಿ ಇದುವರೆಗೂ ವಂಚಿಸಿದ ಇವರ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.