ಮೈಸೂರು: ಯುಜಿ, ಪಿಜಿ, ಪಿ.ಎಚ್ಡಿ ವಿದ್ಯಾರ್ಥಿ ನಿಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದಿಂದ ವಿಶ್ವವಿದ್ಯಾಲಯದ ಕುವೆಂಪು ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು.
ವಿದ್ಯಾರ್ಥಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಭದ್ರತಾ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಸಿಲ್ಲ. ಸಂಶೋಧನಾ ವಿದ್ಯಾರ್ಥಿ ನಿಲಯಕ್ಕೆ ಪಾರ್ಕಿಂಗ್, ವೈಫೈ ವ್ಯವಸ್ಥೆ ಇಲ್ಲ. ಮಹಿಳಾ ವಿದ್ಯಾರ್ಥಿ ನಿಲಯದ ರಸ್ತೆಗಳು ಬೀದಿ ದೀಪವಿಲ್ಲದೆ ಕತ್ತಲಿನಲ್ಲಿವೆ. ಮುಖ್ಯವಾಗಿ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲೂ ಗುಣಮಟ್ಟದ ಆಹಾರದ ಕೊರತೆಯಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟವರು ಸರಿಪಡಿಸಲು ಮುಂದಾಗಿಲ್ಲ. ಹೀಗಾಗಿ ಕೂಡಲೇ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಶೋಧನಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಲ್ಯಾಪ್ಟಾಪ್ ವಿತರಣೆ ಮಾಡಬೇಕು. ಎಸ್ಸಿ, ಎಸ್ಟಿ ಶಿಷ್ಯವೇತನಕ್ಕೆ ಆದೇಶ ಹೊರಡಿಸಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಲೇಖನ ಪ್ರಕಟಿಸುವುದಕ್ಕೆ ೬ ತಿಂಗಳ ಕಾಲಾವಕಾಶ ನೀಡಬೇಕು. ಮಾನಸಗಂಗೋತ್ರಿಯ ಕೇಂದ್ರ ಗ್ರಂಥಾಲಯವನ್ನು ದಿನದ ೨೪ ಗಂಟೆಯೂ ತೆರೆಯಬೇಕು. ಪ್ರತಿತಿಂಗಳ ಎಸ್ಸಿ, ಎಸ್ಟಿ ಶಿಷ್ಯ ವೇತನವನ್ನು ೧೫ ದಿನಗಳೊಳಗೆ ಬಿಡುಗಡೆ ಮಾಡಬೇಕು. ಕೆಲವೊಂದು ವಿಭಾಗಗಳಲ್ಲಿ ಮುಖ್ಯಸ್ಥರು ಪ್ರತಿ ತಿಂಗಳ ಶಿಷ್ಯವೇತನಕ್ಕೆ ಸಹಿ ಮಾಡಲು ನಿರಾಕರಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಜ ಕಾಲೇಜು ಸಂಶೋಧನಾ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಹೇಶ್.ಸಿ, ಗೌರವಾಧ್ಯಕ್ಷ ಮರಿದೇವಯ್ಯ.ಎಸ್, ಕಾರ್ಯದರ್ಶಿ ಕೆ.ಆರ್.ರಂಗಸ್ವಾಮಿ, ಖಜಾಂಚಿ ನಂಜುಂಡಸ್ವಾಮಿ.ಬಿ.ಎಸ್, ಕಾರ್ಯಾಧ್ಯಕ್ಷರಾದ ಶಿವಶಂಕರ್, ಕುಮಾರ್ ಕಲ್ಲಹಳ್ಳಿ, ಹೂವಿನ ಸಿದ್ದು, ಅನಿಲ್, ಜಯಚಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.