ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್ ನಗರ: ಪ್ರತಿ ಗ್ರಾಮಗಳಲ್ಲಿಯೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.
ಅವರು ಸಾಲಿಗ್ರಾಮ ತಾಲೂಕಿನ ಹೆಬ್ಸೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯವರಿಗೆ ಅಭಿನಂದನೆ, ಹಿಂದಿನ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಬೆಳವಣಿಗೆ ಜೊತೆಗೆ ಹಾಲು ಉತ್ಪಾದಕರ ಕುಟುಂಬಗಳು ಅಭಿವೃದ್ಧಿ ಆಗಬೇಕು ಎಂದರು.
ಗ್ರಾಮದಲ್ಲಿ ನಿವೇಶನವನ್ನು ನೀಡಿದರೆ ಆದಷ್ಟು ಬೇಗ ಬಿಎಂಸಿ ಕೇಂದ್ರವನ್ನು ತೆರೆಯಲು ಕ್ರಮವಹಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿನ ರೈತರು, ಯುವಕರು, ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಮೈಮುಲ್ ನಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಹಕಾರ ಸಂಘಗಳಿಗೆ ತಮ್ಮ ಆಡಳಿತ ಮಂಡಳಿಯವರನ್ನು ಆಯ್ಕೆ ಮಾಡುವ ಸಂಧರ್ಭದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಒಮ್ಮತದಿಂದ ಸಂಘದ ಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಂಘದ ಆರ್ಥಿಕ ಹೊರೆಯನ್ನು ಇಳಿಸಬೇಕು ಜೊತೆಗೆ ಗ್ರಾಮಗಳಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಬೇಕು ಆ ನಿಟ್ಟಿನಲ್ಲಿ ಈ ಸಂಘವು ನಡೆಯುತ್ತಿರುವುದು ಇತರೆ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮಶೇಖರ್, ಮೈಮುಲ್ ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತಾರ್, ಮಾರ್ಗ ವಿಸ್ತರಣಾ ಅಧಿಕಾರಿ ನೇಮಿನಾಥ ಮಾಕಣಿ, ಸಂಘದ ಅಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷೆ ಶಾರದಮ್ಮ, ನಿರ್ದೇಶಕರುಗಳಾದ ಸುನೀಲ್ ಕುಮಾರ್, ರಮೇಶ್, ಶ್ರೀನಿವಾಸ್, ನಾಗೇಶ್, ರೋಹಿತ್, ರಾಮಶೆಟ್ಟಿ, ಕಾಳಯ್ಯ, ರಾಜಮ್ಮ, ಭಾರತಿ, ಗಿರಿಜಮ್ಮ, ಸಂಘದ ಮಾಜಿ ಅಧ್ಯಕ್ಷ ಹರೀಶ್, ಮಾಜಿ ನಿರ್ದೇಶಕರುಗಳಾದ ಚೇತನ್, ಯೋಗೇಶ್, ರವಿ, ಧರ್ಮ, ವೆಂಕಟೇಶ್, ಸಿಇಓ ಗಿರೀಶ್, ಹಾಲು ಪರೀಕ್ಷಕ ಹರ್ಷಿತ್, ಮುಖಂಡ ಅಶೋಕ್, ಶಿಕ್ಷಕ ವರದೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.