ಮೈಸೂರು: ವಿದ್ಯೆ ಎಂಬುದು ವ್ಯಕ್ತಿತ್ವದ ಜೊತೆಗೆ ಭವಿಷ್ಯದಲ್ಲಿ ಗೌರವಯುತವಾದ ಸುಂದರ ಬದುಕನ್ನು ರೂಪಿಸಿ ಕೊಡುತ್ತದೆಯಾದ್ದರಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣವನ್ನು ಕೈವಶ ಮಾಡಿಕೊಳ್ಳಬೇಕೆಂದೂ, ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇದಾವುದೂ ಕಷ್ಟವಲ್ಲವೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ರಾಮಾನುಜಾ ರಸ್ತೆ ಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನಗಳಿಸಿರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ ಉನ್ನತ ಶಿಕ್ಷಣದ ತನಕವೂ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗಿ ಅದನ್ನು ಹಾಗೆಯೇ ಉಳಿಸಿಕೊಂಡಲ್ಲಿ ಆಗ ಸಾಧನೆ ಎಂಬುದು ಶಿಕ್ಷಣದಲ್ಲಿ ಅಪಾರ ಕಲಿಕಾಸಕ್ತಿ ಹೊಂದಿರುವ ಸಾಧಕರ ಕೈವಶವಾಗುತ್ತದೆಂದರು.
ಆದರೆ ವಿದ್ಯಾರ್ಥಿ ದಿಸೆಯಲ್ಲಿ ಯಾರು ಕಲಿಕೆಯಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಾರೋ ಅವರು ವಿದ್ಯಾರ್ಥಿ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಹಾಗೆಯೇ ಭವಿಷ್ಯದಲ್ಲಿ ಎಲ್ಲದರಲ್ಲೂ ವಿಫಲರಾಗುತ್ತಾರೆ. ಇದಾಗಬಾರದೆಂದರೆ ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಎಂದಿಗೂ ಆಸಕ್ತಿ ಕಳೆದು ಕೊಳ್ಳಬಾರದು. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎನ್ನುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಸಾರ್ಥಕವಾಗಿ ಅವರ ಜೀವನ ಚಿನ್ನದಂತಾಗಬೇಕಾದರೆ ಶೈಕ್ಷಣಿಕ ಸಾಧನೆಯೇ ಮಾನದಂಡವಾಗುತ್ತದೆ. ಕಾಲಕ್ಕೆ ತುಂಬಾ ಮಹತ್ವವಿದೆ. ಕಣ್ಣಿಗೆ ಕಾಣದಂತೆ ತನ್ನ ಪಾಡಿಗೆ ತಾನು ನಿಲ್ಲದೆ ಓಡುವ ಕಾಲಕ್ಕೆ ಬೆಲೆ ಕಟ್ಟಲಾಗದು. ಕಳೆದು ಹೋದ ಕಾಲ ಎಂದೂ ಮರಳದು. ಆದ್ದರಿಂದ ವಿದ್ಯಾರ್ಥಿಗಳು ಕಾಲದ ಮಹತ್ವವನ್ನೂ ಅರ್ಥ ಮಾಡಿಕೊಂಡು ಸಿಗುವ ಕಾಲವನ್ನು ಅದು ಕಳೆದು ಹೋಗುವ ಮುನ್ನ ಕಿಂಚಿತ್ತೂ ವ್ಯರ್ಥ ಮಾಡದೆ ಕಲಿಕೆಗಾಗಿಯೇ ಅದನ್ನು ಮೀಸಲಿಟ್ಟು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಬೇಕು. ಅಷ್ಟೇ ಅಲ್ಲ , ತನ್ಮೂಲಕ ಹುಟ್ಟಿದ ಊರಿಗೆ, ಜನ್ಮ ಕೊಟ್ಟ ತಂದೆ ತಾಯಿಗಳಿಗೆ, ಕಲಿತ ಶಾಲೆಗೆ, ಕಲಿಸಿದ ಗುರುವರ್ಯರಿಗೆ ಕೀರ್ತಿ ತರುವಂತಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಬೇಕೆಂದ ಅವರು, ಇದಕ್ಕೆಲ್ಲಾ ಜ್ಞಾನವೇ ಮೂಲವಾಗಿದ್ದು ಇದನ್ನು ಗಳಿಸಲು ಪಠ್ಯಪುಸ್ತಕ ಮತ್ತು ಪಠ್ಯೇತರ ಪುಸ್ತಕಗಳೆಲ್ಲವನ್ನೂ ಮಸ್ತಕಕ್ಕೆ ತುಂಬಿಸಿ ಕೊಳ್ಳಬೇಕು. ಹೆಚ್ಚೆಚ್ಚು ಅಧ್ಯಯನ ಮಾಡಿದಷ್ಟು, ಓದಿದಷ್ಟು ವಿದ್ಯಾರ್ಥಿಗಳಾದ ನಿಮ್ಮ ಜ್ಞಾನದ ಪರಿಧಿ ವಿಸ್ತಾರವಾಗುತ್ತದೆಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಉಪಯುಕ್ತವಾಗುತ್ತದೆಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿ ಮಾರ್ಗದರ್ಶನವನ್ನು ನೀಡಿದರು.
ಪ್ರಸ್ತುತ 2024 ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ನಗರದ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಾದ ರಶ್ಮಿ, ನಾಗಮ್ಮ,ಎಚ್.ಎಸ್.ದೀಪಶ್ರೀ, ಹೇಮಾ, ಡಿ.ಲೋಹಿತ್, ನಮ್ರತಾ , ಪಲ್ಲವಿ, ಜಿ.ಅಕ್ಷಯ, ಬಿ.ಎಸ್.ಹರ್ಷಿತಾ, ವಿ.ವರುಣ, ಎಂ.ಜಯಂತಿ, ಎಂ.ಸೂರ್ಯ, ವಿ. ಸುರೇಶ, ಎಂ.ವಿಜಯ, ಕೆ.ಸಂಧ್ಯಾ , ಪಿ. ವಿ. ಮಹದೇವ, ಟಿ. ದೀಪಿಕಾ, ಎಂ.ರಾಧಿಕಾ, ಎಂ.ಪದ್ಮಾವತಿ,ಯಶಸ್ವಿನಿ ಅರಸ್ ಅವರುಗಳಿಗೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಯುವ ಉದ್ಯಮಿ ಮೇಘನಾ ವೆಂಕಟೇಶ್ ಅವರು ಪ್ರಾಯೋಜಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮಯ ಪ್ರಜ್ಞೆ ಇರಬೇಕೆಂಬುದರ ಸಂಕೇತವಾಗಿ ಕೈಗಡಿಯಾರದೊಡನೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಸಂಗದ ಮಾರ್ಗದಲ್ಲಿ ಹೇಗಿರಬೇಕೆಂಬುದರ ಬಗ್ಗೆ ಹಿತವಚನ ಹೇಳಿದರು. ವಿಶ್ರಾಂತ ಶಿಕ್ಷಕ ಹಾಗೂ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಗೋಪಾಲ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಆಶಯವನ್ನು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು. ಜ್ಞಾನ ವಿಜ್ಞಾನ ಸಮಿತಿಯ ಮೈಸೂರು ಜಿಲ್ಲಾಧ್ಯಕ್ಷ ಹೆಚ್. ವಿ. ಮುರಳೀಧರ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಕ್ತಕ ಕವಿ ಎಂ.ಮುತ್ತು ಸ್ವಾಮಿ , ಚಿತ್ರಕಲಾ ಶಿಕ್ಷಕ ಮನೋಹರ್ , ಲೇಖಕ ವಿ.ನಾರಾಯಣರಾವ್, ಸಿರಿಗನ್ನಡ ವೇದಿಕೆಯ ಕವಯತ್ರಿ ನಾಗರತ್ನ, ಜಾದು ಕಲಾವಿದ ಗುರುಸ್ವಾಮಿ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.