ಚಾಮರಾಜನಗರ: ಭಾರತದ ಯುವಕರು ವಿಶ್ವಕ್ಕೆ ಮಾದರಿ. ಜ್ಞಾನಶಕ್ತಿ ಹಾಗು ಸೇವಾ ಧರ್ಮದ ಗುಣದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ.ಯುವಶಕ್ತಿ ವ್ಯಾಸಂಗದ ಜೊತೆಗೆ ಸೇವಾಗುಣವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಪರಿವರ್ತನೆ ಹಾಗೂ ಮಾನಸಿಕ ನೆಮ್ಮದಿ ಹಾಗು ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳಬಹುದು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಯೂತ್ ಫಾರ್ ಸೇವಾ ಸಂಸ್ಥೆ ಸೇವಾ ಭಾರತಿ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಂಭ್ರಮ 2024 ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತಕ್ಕೆ ಭವಿಷ್ಯದಲ್ಲಿ ಮಹತ್ವದ ಸ್ಥಾನ ದೊರೆಯಲಿದೆ. ಯುವಶಕ್ತಿ ಕಲೆ ,ಸಾಹಿತ್ಯ, ವಿಜ್ಞಾನ, ಶಿಕ್ಷಣ , ತಂತ್ರಜ್ಞಾನ ಹಾಗು ಸೇವಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು ಯುವಕರಿಗೆ ಸನ್ಮಾರ್ಗದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಸಂಘಟನೆಯ ಮಾರ್ಗದರ್ಶನವನ್ನು ನೀಡುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆ ಸದಸ್ಯರಾಗುವುದೇ ಒಂದು ಪುಣ್ಯ . ಶಿಕ್ಷಣದ ಜೊತೆಗೆ ಸೇವೆಯ ಗುಣವನ್ನು ಬೆಳೆಸಿ ಸೇವೆಯೇ ಪರಮಧರ್ಮ ಎಂಬ ದಿವ್ಯ ಸ್ಪೂರ್ತಿಯನ್ನು ತುಂಬುತ್ತಿರುವ ಸಂಸ್ಥೆ ತನ್ನ ಚಿಗುರು ಪರಿಕಲ್ಪನೆಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಗಡಿ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವೇದಿಕೆ ಹಾಗೂ ಪ್ರೋತ್ಸಾಹ ಸ್ಪೂರ್ತಿಯನ್ನು ತುಂಬುತ್ತಿದೆ ಎಂದರು.

ಸಾವಿರಾರು ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣದ ಪರಿಕರಗಳನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಯುವಕರು ಶಿಕ್ಷಣದ ಸಂದರ್ಭದಲ್ಲಿ ಎಚ್ಚರಿಕೆಯ ಮಾರ್ಗವನ್ನು ಅನುಸರಿಸಬೇಕು. ಸನ್ಮಾರ್ಗದ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಯೂತ್ ಫಾರ್ ಸೇವಾ ಸಂಸ್ಥೆ ಉನ್ನತವಾದ ಮಾರ್ಗಗಳನ್ನು ರೂಪಿಸುತ್ತಿದೆ . ಸೇವಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಪೂಜಾ ಸುಭಾಷ್ ಮಾತನಾಡಿ ಯುವಕರು ಸದಾ ಕಾಲ ಕ್ರಿಯಾಶೀಲರಾಗಿದ್ದು ಸಮಾಜ ಸೇವೆಯ ಗುಣವನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಯೂಥ್ ಫಾರ್ ಸೇವಾ ಸಂಸ್ಥೆ ಕಾರ್ಯಕ್ರಮವಾಗಿರುವುದು ಬಹಳ ಸಂತೋಷವಾದುದು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷರಾದ ಅಕ್ಷಯ್ ಕುಮಾರ್, ಸಂಜೀವಿನಿ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್, ಯೂಥ್ ಫಾರ್ ಸೇವಾ ಸಂಸ್ಥೆಯ ವಿಷ್ಣು ಪಿ, ತೇಜ ನಾಯಕ್, ಮನೋಜ್ ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.