ಚಾಮರಾಜನಗರ: ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4ರಂದು ನಡೆಯಲಿದ್ದು, ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಾದ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಜೂನ್ 4ರಂದು ನಗರದಲ್ಲಿ ನಡೆಯಲಿರುವ ಮತ ಎಣಿಕೆ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಹೆಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ. ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಸದರಿ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಜೂನ್ 4ರಂದು ನಗರದ ನಂಜನಗೂಡು ರಸ್ತೆಯ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ ಎಂದರು.
ಮತ ಎಣಿಕೆ ಕೇಂದ್ರಕ್ಕೆ 24×7 ಅವಧಿಯಲ್ಲಿ ಐಟಿಬಿಪಿ ತಂಡದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ. ಅಗ್ನಿಶಾಮಕ ದಳದ 8 ಸಿಬ್ಬಂದಿಯುಳ್ಳ ಒಂದು ತಂಡ ವಾಹನದೊಂದಿಗೆ 24×7 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಬಿ ದರ್ಜೆಯ ಒಬ್ಬ ಅಧಿಕಾರಿಯೋರ್ವರನ್ನು 8 ಗಂಟೆಗಳ ಅವಧಿಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಯಂತ್ರಗಳ ಭದ್ರತಾ ಕೊಠಡಿಯನ್ನು ಉಸ್ತುವಾರಿಗಾಗಿ ನೇಮಿಸಲಾಗಿದೆ. ಪ್ರತಿದಿನ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 140 ಅಧಿಕಾರಿಗಳನ್ನು ನಿಯೋಜಿಸಿದ್ದು, ನಿಯೋಜಿತ ಬಿ ದರ್ಜೆಯ ಅಧಿಕಾರಿಗಳ ಕರ್ತವ್ಯವನ್ನು ಮೇಲ್ವಿಚಾರಣೆ ಮಾಡಲು 6 ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು
ಮತ ಎಣಿಕೆ ಕೇಂದ್ರದಲ್ಲಿ ಮತ ಯಂತ್ರಗಳ ಭದ್ರತಾ ಕೊಠಡಿಗಳ ಮುಂದೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸದರಿ ವೀಡಿಯೋ ಚಿತ್ರೀಕರಣವನ್ನು ವೀಕ್ಷಿಸಲು ಎಲ್ಇಡಿ ಟಿವಿಯನ್ನು ಹಾಕಿಸಲಾಗಿದೆ. ಸಿಸಿ ಟಿವಿಗಳು ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಲು 6 ಜನ ತಾಂತ್ರಿಕ ಸಿಬ್ಬಂದಿಗಳನ್ನು 3 ಪಾಳಿಯಲ್ಲಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 100 ಮೀ. ಒಳಗಡೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಯಾವುದೇ ವಾಹನವನ್ನು ಒಳಗಡೆ ಬಿಡುವುದಿಲ್ಲ. ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ಸಲುವಾಗಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ಸ್, ಯುಪಿಎಸ್, ಟೆಲಿಫೋನ್, ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಣಿಕೆ ಕಾರ್ಯವನ್ನು ಶಾಂತಿ ಮತ್ತು ಸುವ್ಯವಸ್ಥೆ ಮತ್ತು ಸುರಕ್ಷಿತವಾಗಿ ನಡೆಸಲು ಅಗತ್ಯ ಬ್ಯಾರಿಕೇಡಿಂಗ್, ಸಿಗ್ನಲ್ಸ್ ಮತ್ತು ವಾಹನ ನಿಲುಗಡೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಂಚೆ ಮತಪತ್ರಗಳ ಮೂಲಕ ಒಟ್ಟು 4405 ಮತ ಚಲಾವಣೆಯಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ತಲಾ 14 ಟೇಬಲ್ (ಮೇಜು)ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್ಗೆ ತಲಾ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಮಂದಿ ಎಣಿಕೆ ಸಹಾಯಕರು, 14 ಮಂದಿ ಮೈಕ್ರೋ ಅಬ್ಸರ್ವರ್ ಹಾಗೂ ಅಂಚೆ ಮತ ಪತ್ರ ಎಣಿಕೆಗೆ 5 ಮಂದಿ ಸೇರಿ ಒಟ್ಟು 45 ಸಿಬ್ಬಂದಿಗಳು ಇರಲಿದ್ದಾರೆ. ಅಂಚೆ ಮತ ಪತ್ರ ಎಣಿಕೆಗೆ 8 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, 8 ಮಂದಿ ಏಜೆಂಟರನ್ನು ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಯು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯವರ ಸಮ್ಮುಖದಲ್ಲಿ ನಡೆಯಲಿದೆ ಎಂದರು.

ಎವಿಎಂ ಮತ ಯಂತ್ರಗಳ ಮೂಲಕ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಏಜೆಂಟರಂತೆ ಒಟ್ಟು 120 ಮಂದಿ ಎಣಿಕೆ ಏಜೆಂಟರನ್ನು ನೇಮಕಾತಿ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ಗಳಂತೆ ಒಟ್ಟು 112 ಮತ ಎಣಿಕೆ ಟೇಬಲ್ಗಳನ್ನು ಸ್ಥಾಪಿಸಲಾಗಿರುತ್ತದೆ. ಸದರಿ ಮತ ಎಣಿಕೆ ಟೇಬಲ್ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಕಾರ್ಯವನ್ನು ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸೇವಾ ಮತದಾರರು ಮತದಾನ ಮಾಡಿ ಕಳುಹಿಸಿರುವ ಮತಪತ್ರಗಳ ಎಣಿಕೆಯನ್ನು ಇಟಿಪಿಬಿಎಸ್ ತಂತ್ರಾಂಶದಲ್ಲಿ ನಡೆಸಲು 2 ಮತ ಎಣಿಕೆ ಟೇಬಲ್ಗಳನ್ನು ಸ್ಥಾಪಿಸಲಾಗಿದೆ. ನಮೂನೆ-18 ರಲ್ಲಿ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಲು ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಎಣಿಕೆ ನಡೆಯುವ ಸ್ಥಳ, ಎಣಿಕೆ ಕಾರ್ಯದ ಸಮಯ ಮತ್ತು ಎಣಿಕೆ ಕಾರ್ಯ ನಡೆಸುತ್ತಿರುವ ಟೇಬಲ್ಗಳ ವಿವರವನ್ನು ನೀಡಲಾಗಿದೆ. ಸಾಲಾಗಿ ಜೋಡಿಸಿದ ಟೇಬಲ್ಗಳ ಮೇಲೆ ಮತ ಎಣಿಕೆ ನಡೆಸಲಾಗುತ್ತದೆ. ಪ್ರತಿಯೊಂದು ಸಾಲಿನಲ್ಲಿರುವ ಟೇಬಲ್ಗಳ ಕ್ರಮ ಸಂಖ್ಯೆಯನ್ನು ಕೊಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್ ಬಳಿ ಮತ ಎಣಿಕೆ ಏಜೆಂಟರುಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತ ಎಣಿಕೆ ಸಭಾಂಗಣದಲ್ಲಿ ಮತ ಎಣಿಕೆಯ ಏಜೆಂಟರುಗಳಿಗೆ ಇವಿಎಂ ಗಳು ಕೈಗೆಟುಕದಂತೆ ಪ್ರತಿಯೊಂದು ಎಣಿಕೆ ಟೇಬಲ್ಗೆ ಬ್ಯಾರಿಕೇಟ್ ಮತ್ತು ತಂತಿ ಮೆಷ್ ಅನ್ನು ಅಳವಡಿಸಲಾಗಿರುತ್ತದೆ ಎಂದು ಹೇಳಿದರು.
ಮತ ಎಣಿಕೆಯ ಏಜೆಂಟರು ಮತ ಎಣಿಕೆ ಕಾರ್ಯಕ್ಕೆ ಅವರು ಹಾಜರಾದಾಗ ತಮ್ಮ ನೇಮಕಾತಿ ಪತ್ರದ ಜೊತೆಗೆ (ನಮೂನೆ-18) ತಮ್ಮ ಗುರುತಿನ ಚೀಟಿಯನ್ನು ಮತಗಳ ಎಣಿಕೆಗಾಗಿ ನಿಗದಿಪಡಿಸಿರುವ ಸಮಯಕ್ಕೆ (ದಿನಾಂಕ: 04.06.2024 ರಂದು ಬೆಳಿಗ್ಗೆ 8-00 ಗಂಟೆ) ಕನಿಷ್ಟ ಪಕ್ಷ ಒಂದು ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಸಮಯಕ್ಕೆ ಮೀರಿ ಸಲ್ಲಿಸಲ್ಪಟ್ಟ ಯಾವುದೇ ನೇಮಕಾತಿ ಪತ್ರಗಳನ್ನು ಅಂಗೀಕರಿಸಲಾಗುವುದಿಲ್ಲ. ಮತ ಎಣಿಕೆ ಏಜೆಂಟರಿಗೆ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಐಫೋನ್, ಲ್ಯಾಪ್ ಟಾಪ್ ಅಥವಾ ಅಥವಾ ವಿಡಿಯೋ (ಶ್ರವ್ಯ-ದೃಶ್ಯ) ಚಿತ್ರೀಕರಣ ಮಾಡಿ ದಾಖಲಿಸುವಂತಹ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರ್ಯಾಂಡಂ ಆಗಿ ಆಯ್ಕೆ ಮಾಡಿದ 5 ಮತಗಟ್ಟೆಗಳ ವಿವಿ ಪ್ಯಾಟ್ ಪೇಪರ್ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆ ಕಾರ್ಯ ನಡೆಸಲಾಗುವ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಕಾರ್ಯ ನಡೆಸಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಾದ ಟಿ.ವಿ, ಇಂಟರ್ ನೆಟ್ ಸೇರಿದಂತೆ ಅಗತ್ಯ ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹು ಅವರು ಸ್ಟ್ರಾಂಗ್ ರೂಂ ಭದ್ರತೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ಅನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಭದ್ರತೆ ಕಾರ್ಯಕ್ಕಾಗಿ ಕೆ.ಎಸ್.ಆರ್.ಪಿ ಹಾಗೂ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. 80 ಮಮದಿ ಅಧಿಕಾರಿಗಳು, 300 ಸಿಬ್ಬಂದಿಗಳು ಹಾಗೂ 350 ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನೀಯೋಜಿಸಲಾಗಿದೆ. ಪಾರ್ಕಿಂಗ್ ವ್ಯವರ್ಸಥೆಯನ್ನು ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇತರರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.