ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಮುದಾಯದ ಅಭಿವೃದ್ಧಿಗಾಗಿ ಸಂಘಟನೆಗಳ ಸ್ಥಾಪನೆ ಶ್ಲಾಘನೀಯ ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘದ ಕಛೇರಿ ಉದ್ಘಾಟನೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಿರಿಯಾಪಟ್ಟಣದಲ್ಲಿ ನೂತನವಾಗಿ ಒಕ್ಕಲಿಗರ ಸಂಘ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ, ಒಕ್ಕಲಿಗ ಸಮುದಾಯ ಎಲ್ಲರಿಗೂ ನ್ಯಾಯ ಒದಗಿಸುವ ಸಮುದಾಯವಾಗಿದೆ, ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಬೆಳವಣಿಗೆಗೆ ಶ್ರಮಿಸಿ ಜನಪರ ಕೆಲಸ ಮಾಡಲಿ ಎಂದು ಶುಭ ಕೋರಿದರು.
ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಲು ಕೆಂಪೇಗೌಡರ ದೂರದೃಷ್ಟಿ ಆಡಳಿತ ಕಾರಣವಾಗಿದೆ, ನಮ್ಮ ರಾಜ್ಯದ ಬೆಳವಣಿಗೆಗೆ ಕೆಂಪೇಗೌಡರವರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಸಂಘದ ಗೌರವಾದ್ಯಕ್ಷ ಪಿ.ಪ್ರಶಾಂತ್ ಗೌಡ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರವರ ಆದರ್ಶಗಳನ್ನು ಎಲ್ಲರೂ ಅನುಸರಿಸಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು, ತಾಲೂಕಿನಲ್ಲಿ ಒಕ್ಕಲಿಗ ಸಮಾಜದ ಸರ್ವೋತೋಮುಖ ಬೆಳವಣಿಗೆಯಾಗಬೇಕು ಎನ್ನುವ ಉದ್ದೇಶದಿಂದ ಪಿರಿಯಾಪಟ್ಟಣದಲ್ಲಿ ಒಕ್ಕಲಿಗರ ಸಂಘ ಸ್ಥಾಪಿಸಿ ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಾಗುವುದು ಎಂದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ಸಂಘಟನೆಗಳು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು, ಕೆಂಪೇಗೌಡರವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಎಲ್ಲರೂ ಸಮುದಾಯದ ಬೆಳವಣಿಗೆಗಾಗಿ ದುಡಿಯಬೇಕು ಎಂದರು.
ಈ ಸಂದರ್ಭ ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ, ಉಪಾಧ್ಯಕ್ಷರಾದ ಚಂದ್ರೆಗೌಡ, ಜಗದೀಶ್, ಕಾನೂನು ಸಲಹೆಗಾರ ಕೆ.ಡಿ ಸಂದೀಪ್, ಕಾರ್ಯದರ್ಶಿ ಮೋಹನ್, ಖಜಾಂಚಿ ಮನು, ನಿರ್ದೇಶಕರಾದ ಗಣೇಶ್, ಮಧು, ರಾಜೇಶ್, ಪಿ.ಕುಮಾರ್, ಅರುಣ್, ಅನಿಲ್, ರಾಜು, ಕುಮಾರ್, ರವಿ, ಪ್ರವೀಣ್, ಮಧು, ಭಾಸ್ಕರ್, ಮುಖಂಡರಾದ ಕೃಷ್ಣೆಗೌಡ, ಹನುಮಂತು ಸೇರಿ ಸಂಘದ ಪದಾಧಿಕಾರಿಗಳು ಇದ್ದರು.