Saturday, April 19, 2025
Google search engine

Homeಸ್ಥಳೀಯನಂಜನಗೂಡು ತಾಲೂಕು ಮಟ್ಟದ ಜನಸ್ಪಂದನ:  89 ಅರ್ಜಿ ಸ್ವೀಕಾರ, ವಾರದಲ್ಲಿ ಪರಿಹಾರ

ನಂಜನಗೂಡು ತಾಲೂಕು ಮಟ್ಟದ ಜನಸ್ಪಂದನ:  89 ಅರ್ಜಿ ಸ್ವೀಕಾರ, ವಾರದಲ್ಲಿ ಪರಿಹಾರ

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

ಮೈಸೂರು: ಅಲ್ಲಿ ಸಮಸ್ಯೆಗಳು ಅನಾವರಣಗೊಂಡಿದ್ದವು,ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿದ್ದರೆ, ಇನ್ನೊಂದಿಷ್ಟು ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ದೊರಕಿಸುವುದಾಗಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಭರವಸೆ ನೀಡಿದರು.

ಅಧಿಕಾರಿಗಳು 3 ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ  ರೈತರ ಹಾಗೂ ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನು  ಕಡ್ಡಾಯವಾಗಿ ನಡೆಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಒಂದು ವೇಳೆ ಈ ವಿಷಯವಾಗಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ನೂರಾರು ದೂರುಗಳನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.

ಪ್ರಮುಖವಾಗಿ ಕುಡಿಯುವ ನೀರು, ಚರಂಡಿ ದುರಸ್ಥಿ, ಸರ್ಕಾರಿ ಭೂಮಿ ಒತ್ತುವರಿ,ಸ್ಥಳೀಯರಿಗೆ ಉದ್ಯೋಗ,ಪುಟ್ಪಾತ್ ಅತಿಕ್ರಮಣ ತೆರವು,ಗೋಮಾಳ ತೆರವು ಇಂತಹ ಮೂಲಭೂತ ಸಮಸ್ಯೆಗಳು ಚರ್ಚೆಗೆ ಬಂದವು.

ರೈತ ಮುಖಂಡರೋರ್ವರು ದೂರು ನೀಡಿ, ತಾಲೂಕಿನ ಹಲವಾರು ಕಡೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ರೈತರು ದನ ಕರು ಮೇಯಿಸಲು ಗೋಮಾಳಗಳೇ ಮಾಯವಾಗಿವೆ. ಸರ್ಕಾರಿ ಜಮೀನನ್ನು ಸರ್ಕಾರ ವಶಪಡಿಸಿಕೊಂಡು, ಅರಣ್ಯ ಇಲಾಖೆ ಮುಖಾಂತರ ಗಿಡಗಳನ್ನು ಬೆಳೆಸಲಿ, ಈಗಾಗಲೇ ಅರ್ಜಿಕೊಟ್ಟು ಸಾಕಾಗಿದೆ, ಮುಂದಾದರೂ ಗಮನ ಹರಿಸಿ ಎಂದರು.

ಕಳಲೆ ಗ್ರಾಮದ ಮಾಜಿ ಸೈನಿಕರಾದ ಮಹೇಶ್ ಅರ್ಜಿ ನೀಡಿ, ಮಾಜಿ ಸೈನಿಕನಾದ ನನಗೆ ಜೀವನೋಪಾಯಕ್ಕಾಗಿ ಜಮೀನು ನೀಡಲು ಅವಕಾಶವಿದ್ದು, ಜಮೀನು ನೀಡಿ ಈಗಾಗಲೇ ಹತ್ತು ಬಾರಿ ದೂರು ನೀಡಿದ್ದೇನೆ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ  ಮಾಜಿ ಸೈನಿಕರಿಗೆ ಗೌರವಯುತವಾಗಿ ನಡೆಸಿಕೊಳ್ಳುವುದು ಸರ್ಕಾರದ ಕರ್ತವ್ಯ ಹಾಗಾಗಿ ಈ ಬಗೆಗೆ ತಕ್ಷಣ ಗಮನ ಹರಿಸಲಾಗುವುದು ಎಂದರು.

ಪಕ್ಕದ ಮನೆಯವರಿಗೆ ಡೆಂಗ್ಯು : ನಂಜನಗೂಡು ನಗರದ ನಾಗರೀಕರೋರ್ವರು ದೂರು ನೀಡಿ, ನಮ್ಮ ಬಡಾವಣೆಯ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಸ್ವಚ್ಚ ಮಾಡಿ ವರ್ಷಗಳೇ ಕಳೆದಿವೆ, ನಮ್ಮ ಪಕ್ಕದ ಮನೆಯವರಿಗೆ ಡೆಂಗ್ಯೂ ಬಂದಿದೆ ಎಂದಾಗ ಜಿಲ್ಲಾಧಿಕಾರಿಗಳು ಈ ದಿನ ಸಂಜೆಯೊಳಗೆ ಸ್ವಚ್ಚ ಮಾಡಬೇಕೆಂದು ತಾಕೀತು ಮಾಡಿದರು.

ರೈತ ಸಂಘದ ಮುಖಂಡರು ಅರ್ಜಿ ನೀಡಿ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡುವುದಾಗಿ ಹೇಳಿ ಉದ್ಯೋಗ ನೀಡಿರುವುದಿಲ್ಲ, ಹೊಸಕೋಟೆಯಲ್ಲಿ ಇಂತಹ ಪ್ರಕರಣಗಳಲ್ಲಿ ಉದ್ಯೋಗ ನೀಡಿದ್ದಾರೆ.ಅದರಂತೆ ನಮ್ಮಲ್ಲಿಯೂ ಉದ್ಯೋಗ ನೀಡಬೇಕೆಂದರು.

ಮುಂಬರುವ ದಿನಗಳಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಖುದ್ದಾಗಿ ಭೇಟಿನೀಡಿ  ಸಾರ್ವಜನಿಕರಿಗೆ ಸ್ಪಂದಿಸಿ, ತಕ್ಷಣವೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಲಿ ಕೆರೆಗಳಿಗೆ ನೀರು ತುಂಬಿಸಿ ಅವಶ್ಯ ನಾಲೆಗಳಿಗೆ ನೀರು ಬಿಡುವಂತೆ ಸೂಚಿಸಿ. ಕುಡಿಯುವ ನೀರಿನ ಸಮಸ್ಯೆ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಂದಾಯ ಇಲಾಖೆಯ ಇ-ಆಫೀಸ್ ನ ತಾಂತ್ರಿಕ ಸಮಸ್ಯೆಯಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವುದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗೆ ಒತ್ತುಕೊಟ್ಟು ಶೀಘ್ರವೇ ಪರಿಹರಿಸಿ, ಜನರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು, ನಂಜನಗೂಡು ತಾಲೂಕಿನ ತಹಶೀಲ್ದಾರರಾದ ಶಿವಮೂರ್ತಿ ಸೇರಿದಂತೆ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular