ಚಾಮರಾಜನಗರ: ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟದ ವನ್ಯಜೀವಿ ಹಾಗೂ ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ರವರಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನೆಯು ಪ್ರಾರಂಭವಾಗಿ ಶ್ರೀ ಬಿ.ರಾಚಯ್ಯ ಜೋಡಿ ರಸ್ತೆಯ ವೃತ್ತದಲ್ಲಿ ಸ್ವಲ್ಪ ಹೊತ್ತು ಸುತ್ತುವರಿದು ಡಿಸಿಎಫ್ ಸಂತೋಷ್ ಕುಮಾರ್ ಹಾಗೂ ನಂದೀಶ್ ರವರ ವಿರುದ್ಧ ಘೋಷಣೆ ಕೂಗಿ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.ಮಹದೇಶ್ವರ ಬೆಟ್ಟದ ಸುತ್ತಲಿನ ಪೋಡಿನ ರೈತರು ಶತಮಾನಗಳಿಂದ ಕಾಡನ್ನು ನಂಬಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಬಂದ ಡಿಸಿಎಫ್ ಸಂತೋಷ್ ಕುಮಾರ್ ಹಾಗೂ ನಂದೀಶ್ ರವರು ರೈತರ ದೊಡ್ಡಿಗಳಿಗೆ ಬೆಂಕಿ ಹಾಕಿ ಪಟಾಕಿ ಸಿಡಿಸಿ ಸಣ್ಣ ಸಣ್ಣ ಕರುಗಳನ್ನು ಓಡಿಸಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಹಾಗೂ ಈ ಹಿಂದೆ ಇದ್ದ ಡಿಸಿಎಫ್ ಏಡುಕೊಂಡಲ ಅವರು ರೈತರಿಗೆ ತಲುಪಿಸಿದ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸಿದ್ದಾರೆ.ಆದ್ದರಿಂದ ರೈತರ ದೊಡ್ಡಿಗಳಿಗೆ ಬೆಂಕಿ ಹಾಕಿರುವುದರಿಂದ ಇವರ ಮೇಲೆ ಎಫ್ ಐ ಆರ್ ದಾಖಲಿಸಬೇಕು ಹಾಗೂ ಇದರ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತಂದಾಗ ಒಂದು ವಾರದ ಕಾಲಾವಕಾಶ ಕೇಳಿದರು.ಆ ಒಂದು ವಾರವು ಮುಗಿದಿರುತ್ತದೆ ಆದ್ದರಿಂದ ಅವರ ಮೇಲೆ ಮುಂದಿನ ಒಂದು ವಾರದೊಳಗೆ ಎಫ್ ಐಆರ್ ದಾಖಲಿಸಲು ವಿಫಲವಾದಲ್ಲಿ ಮಹದೇಶ್ವರ ಬೆಟ್ಟದಲ್ಲಿ ರೈತರು ಹಾಗೂ ಜಾನುವಾರುಗಳೊಡನೆ ರಸ್ತೆ ತಡೆದು ಚಳುವಳಿ ನಡೆಸಬೇಕಾಗುತ್ತದೆ.ಇದರಿಂದ ಯಾವುದೇ ಅನಾಹುತಗಳು ಕಂಡು ಬಂದಲ್ಲಿ ಅದಕ್ಕೆ ಡಿಸಿಎಫ್ ಗಳೇ ನೇರ ಹೊಣೆಗಾರರಾಗುತ್ತಾರೆ.ಅಲ್ಲದೆ ಯಾವುದೇ ಜನಪ್ರತಿನಿಧಿಗಳನ್ನು ಬೆಟ್ಟಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು : ಕಾಡಿನಲ್ಲಿ ರೈತರಿಗೆ ದೊಡ್ಡಿ ಹಾಕಲು ಅವಕಾಶ ನೀಡಬೇಕು.ಈ ಹಿಂದೆ ಇದ್ದ ಡಿಸಿಎಫ್ ಏಡುಕೊಂಡಲರವರ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಬೇಕು.ಡಿಸಿಎಫ್ ಗಳಾದ ಸಂತೋಷ್ ಕುಮಾರ್ ಹಾಗೂ ನಂದೀಶ್ ರವರ ಮೇಲೆ ಎಫ್ಐಆರ್ ದಾಖಲಾಗಬೇಕು.ತಕ್ಷಣ ಉಸ್ತುವಾರಿ ಸಚಿವರು ಆ ಭಾಗದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಒಂದು ವಾರದ ಒಳಗೆ ಮೇಲ್ಕಂಡ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ನಂತರ ಸ್ಥಳಕ್ಕಾಗಮಿಸಿದ ಪ್ರಭಾರ ಜಿಲ್ಲಾಧಿಕಾರಿ ಎಸ್ ಪೂವಿತ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಮುಖಂಡರಾದ ಚಂಗಡಿ ಕರಿಯಪ್ಪ, ಶಿವಮೂರ್ತಿ,ಪಿ.ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.