ಬೆಂಗಳೂರು : ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಿರುವ ಹೆಸರನ್ನು ಮತ್ತೆ ರಾಮನಗರ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಅವರು, ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ಅವರು, ಕುಮಾರಸ್ವಾಮಿ ಯಾವಾಗಲೂ ಸರ್ವನಾಶದ ರಾಜಕಾರಣ ಮಾಡಿಕೊಂಡೇ ಬರುತ್ತಿದ್ದಾರೆ. ನಾವು ಒಳ್ಳೆಯದು ಮಾಡಿದರೂ ಅವರು ಸರ್ವನಾಶ ಮಾಡುವುದನ್ನು ಬಯಸಿಕೊಂಡು ಬಂದಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಆಚಾರ, ವಿಚಾರ ಎಲ್ಲವೂ ಕೂಡಾ ನಮಗೆ ಅರಿವಿದೆ ಎಂದು ಕಿಡಿಕಾರಿದರು.
೨೦೨೮ ಕ್ಕೆ ರಾಮನಗರ ಹೆಸರು ಬದಲಾವಣೆ ಮಾಡುತ್ತೇವೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ೨೦೨೮ಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡುವುದು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ. ೨೦೨೮ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಲಿದೆ ಬರೆದಿಟ್ಟುಕೊಳ್ಳಿ” ಎಂದು ಡಿಕೆಶಿ ಸವಾಲು ಹಾಕಿದರು.
ನಾವು ರಾಮನಗರವನ್ನೇನು ಮುಟ್ಟುತ್ತಿಲ್ಲ. ಇವರು ಬಂದು ರಾಮನಗರಕ್ಕೆ ಅಕ್ರಮ ಮಾಡಲು ಪ್ರಯತ್ನ ಮಾಡಿದ್ದಾರೆ. ರಾಜಕೀಯಕ್ಕೆ ಅವರಿಗೆ ಅವಕಾಶ ಇದೆ. ಇದು ನಮ್ಮ ಜಿಲ್ಲೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದವರು ನಮ್ಮವರು. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದ್ದು ಬೆಂಗಳೂರಿನಲ್ಲಿ. ರಾಮಕೃಷ್ಣ ಹೆಗಡೆ ಬಂದಿದ್ದು ಬೆಂಗಳೂರಿನಲ್ಲೇ. ದೇವೇಗೌಡರು ಬಂದಿದ್ದು ಬೆಂಗಳೂರು ಜಿಲ್ಲೆಯಲ್ಲೇ. ಕುಮಾರಸ್ವಾಮಿ ಬಂದಿದ್ದು ಬೆಂಗಳೂರು ಜಿಲ್ಲೆಯಲ್ಲೇ. ಅಂದು ನಾವು ಸಲಹೆ ಕೊಟ್ಟಿದ್ದೇವೆ. ಅವರು ಹೆಸರು ಇಟ್ಟಿದ್ದು ತಪ್ಪಲ್ಲ ಮತ್ತು ಅವರ ವಿಚಾರಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಇವತ್ತು ಬೆಂಗಳೂರು ವಿಶ್ವ ಮಟ್ಟದ್ದಲ್ಲಿ ಹೆಸರುವಾಸಿಯಾಗಿದೆ. ಆ ಹೆಸರನ್ನು ಯಾಕೆ ನಾವು ಹಾಳು ಮಾಡಿಕೊಳ್ಳಬೇಕು ಪೂರ್ವಜರು ಇಟ್ಟ ಹೆಸರನ್ನು ನಾವು ಯಾಕೆ ಹಾಳು ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ರಾಮನಗರ ಕೇಂದ್ರ ಸ್ಥಾನ ಅಲ್ಲೇ ಇರುತ್ತದೆ. ನಮ್ಮ ಜನಕ್ಕೆ ಹೊಸ ದಿಕ್ಕು, ಹೊಸ ಆಲೋಚನೆ, ಅಭಿವೃದ್ಧಿ ಇವೆಲ್ಲವೂ ಮುಂದಿನ ಪೀಳಿಗೆಗೆ ನಾವು ಆಲೋಚನೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.