ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ನೂತನ ತಹಶೀಲ್ದಾರ್ ಆಗಿ ನಿಸರ್ಗ ಪ್ರಿಯಾ ಶುಕ್ರವಾರ ಅಧಿಕಾರವನ್ನು ಸ್ವೀಕರಿಸಿದರು. ನಿರ್ಗಮಿತ ತಹಶೀಲ್ದಾರ್ ಕುಂಜಿ ಅಹಮದ್ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನೂತನ ತಹಶೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ ನಾನು ಪಕ್ಕದ ಕೃಷ್ಣರಾಜನಗರ ತಾಲೂಕಿನವರಾಗಿದ್ದು, ವಿದ್ಯಾರ್ಥಿ ದಿಸೆಯಿಂದಲೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಡನಾಟ ಹೊಂದಿದ್ದು, ಈ ತಾಲೂಕಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಎಲ್ಲರ ವಿಶ್ವಾಸದೊಂದಿಗೆ ಅಧಿಕಾರ ನಿರ್ವಹಿಸುತ್ತೇನೆ ಎಂದರು.
ನಿರ್ಗಮಿತ ತಹಶೀಲ್ದಾರ್ ಕುಂಜಿ ಅಹಮದ್ ಮಾತನಾಡಿ, ಪಿರಿಯಾಪಟ್ಟಣ ತಾಲೂಕಿನಲ್ಲಿ ಇದ್ದಷ್ಟು ದಿನ ತಾಲೂಕಿನ ಜನತೆಯ ಪರವಾಗಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿದ್ದೇನೆ, ಜನತೆಯ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಿದ ಖುಷಿ ನನಗಿದೆ. ಜನಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದೆಯೂ ನೂತನ ತಹಶೀಲ್ದಾರ್ ಅವರಿಗೂ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶಕೀಲಾ ಬಾನು, ವಿನೋದ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಶಿವಮೂರ್ತಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಟರಾಜ್ ನಾಯ್ಕ, ಚಂದ್ರು, ಬಿ.ಟಿ.ಮಹದೇವ್, ಮೋಹನ್ ಕುಮಾರ್, ಪುಟ್ಟರಾಜು, ಶಿವಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.