ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡುವ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ಗಣೇಶೋತ್ಸವ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಎಸೆತ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಮುಸ್ಲಿಮರು ಮಹಿಷನನ್ನು ನಂಬುವುದಿಲ್ಲ, ಮುಂದೊಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ ಎಂದರು. ಮಹಿಷನ ಮೇಲೆ ನಂಬಿಕೆ ಇದ್ದರೆ ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಅವನ ಥರದ ಮಗುವೇ ಹುಟ್ಟಲಿ ಎಂದು ಪೂಜೆ ಮಾಡಿ. ಆದರೆ ದಸರಾ ಬಂದಾಗ ಅಪಸ್ವರ ಬೇಡ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ ಮಾಡಿಕೊಳ್ಳಲಿ. ಆದರೆ ಚಾಮುಂಡಿ ಬೆಟ್ಟದಲ್ಲಿ ಅಲ್ಲ. ಇದಕ್ಕೆ ಚಾಮುಂಡಿ ಭಕ್ತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.