ಬೆಂಗಳೂರು: ದಸರಾ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಅಂತ ಮನೆ ಕಡೆ ಹೋಗಲು ಸಜ್ಜಾದವರಿಗೆ ಟಿಕೆಟ್ ದರ ಏರಿಕೆ ಮಾಡಿಪ್ರಯಾಣಿಕರಿಗೆಶಾಕ್ ನೀಡಿದ್ದಾರೆ.
ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯದಶಮಿ, ಭಾನುವಾರ ಹೇಗೂ ರಜೆ ಇದ್ದು, ಒಟ್ಟು ಮೂರು ದಿನಗಳ ಕಾಲ ರಜೆ. ಹೀಗಾಗಿ ಗುರುವಾರವೇ ಊರಿಗೆ ತೆರಳಲು ಜನರು ಮುಂದಾಗಿದ್ದರು. ಆದರೆ ಖಾಸಗಿ ಬಸ್ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಸ್ಸುಗಳ ಸಾಮಾನ್ಯ ಟಿಕೆಟ್ ದರ (ರೂ.ಗಳಲ್ಲಿ)
- ಬೆಂಗಳೂರು-ಹಾವೇರಿ: 850-1000
- ಬೆಂಗಳೂರು-ದಾವಣಗೆರೆ: 499-2000
- ಬೆಂಗಳೂರು-ಕೋಲಾರ: 90-800
- ಬೆಂಗಳೂರು-ಶಿವಮೊಗ್ಗ: 550-1000
- ಬೆಂಗಳೂರು-ಹಾಸನ: 500-700
- ಬೆಂಗಳೂರು-ಮಂಗಳೂರು: 630-1450
- ಬೆಂಗಳೂರು-ಮೈಸೂರು: 250-900
- ಬೆಂಗಳೂರು-ಹುಬ್ಬಳ್ಳಿ: 650-3000
- ಬೆಂಗಳೂರು-ಧಾರವಾಡ: 650-1400
- ಬೆಂಗಳೂರು-ಮಂಡ್ಯ: 184-400
ಖಾಸಗಿ ಬಸ್ಸುಗಳ ಈಗಿನ ಟಿಕೆಟ್ ದರ (ರೂ.ಗಳಲ್ಲಿ)
- ಬೆಂಗಳೂರು-ಹಾವೇರಿ: 1200-4000
- ಬೆಂಗಳೂರು-ದಾವಣಗೆರೆ: 1200-4000
- ಬೆಂಗಳೂರು-ಕೋಲಾರ: 90-3000
- ಬೆಂಗಳೂರು-ಶಿವಮೊಗ್ಗ: 950-4000
- ಬೆಂಗಳೂರು-ಹಾಸನ: 1200-1500
- ಬೆಂಗಳೂರು-ಮಂಗಳೂರು: 1200-2700
- ಬೆಂಗಳೂರು-ಮೈಸೂರು: 250-2500
- ಬೆಂಗಳೂರು-ಹುಬ್ಬಳ್ಳಿ: 1500-3800
- ಬೆಂಗಳೂರು-ಧಾರವಾಡ: 1400-3500
- ಬೆಂಗಳೂರು-ಮಂಡ್ಯ: 237-900
ಈ ಮಧ್ಯೆ, ದಸರಾ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್ಟಿಸಿ 2 ಸಾವಿರ ಹೆಚ್ಚುವರಿ ಬಸ್ ಗಳನ್ನು ನಿಯೋಜನೆ ಮಾಡಿದೆ. ಆದಾಗ್ಯೂ ಅವುಗಳಲ್ಲಿಯೂ ಬಹುತೇಕ ಸೀಟ್ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ.
ಖಾಸಗಿ ಬಸ್ ಮಾಲೀಕರಿಂದ ಸಮರ್ಥನೆ
ಹಬ್ಬಗಳ ಸೀಸನ್ನಲ್ಲಿ ಟಿಕೆಟ್ ದರ ಏರಿಕೆಯನ್ನು ಖಾಸಗಿ ಬಸ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿದ್ದು, ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಬೀದಿಗೆ ಬಂದಿದ್ದೇವೆ. ಮೊದಲು ಶಕ್ತಿ ಯೋಜನೆಯನ್ನು ನಿಲ್ಲಿಸಿ. ನಾವು ಮಾತ್ರ ಅಲ್ಲ ಕೆಎಸ್ಆರ್ಟಿಸಿ ಬಸ್ಸಿನವರು ಕೂಡ ಟಿಕೆಟ್ ದರ ಹೆಚ್ಚಳ ಮಾಡುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಆರ್ಟಿಒ ಅಧಿಕಾರಿಗಳು, ಸುಳ್ಳು ಕೇಸ್ಗಳನ್ನು ದಾಖಲಿಸಿ ನಮಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.