ವರದಿ: ವಿನಯ್ ದೊಡ್ಡಕೊಪ್ಪಲು
ಕೆ .ಆರ್.ನಗರ : ಹಲವಾರು ವರ್ಷಗಳಿಂದ ನಿಂತು ಹೋಗಿದ್ದ ಜಿಲ್ಲೆಯ ರೈತರ ಜೀವನಾಡಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಪುನಾರಂಬಿಸಲು ನಿರಾಣಿ ಶುಗರ್ಸ್ ಲಿಮಿಟೆಡ್, ಮುಧೋಳ ಇವರಿಗೆ ಗುತ್ತಿಗೆ ನೋಂದಣಿಗೆ ಅನುಮತಿ ನೀಡಿದ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಹಾಗೂ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಈ ಹಿಂದೆ ಯಾವುದೊ ಹಲವಾರು ಕಾರಣಗಳಿಂದ ನಿಂತು ಹೋಗಿದ್ದ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನಶ್ಚತನಗೊಳಿಸಲು 2020-21 ನೇ ಹಂಗಾಮಿನಲ್ಲಿ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರದ ಅನುಮೋದನೆ ದೊರೆತಿತ್ತು.

ಈ ಅನುಮೋದನೆಗೆ ಪೂರಕವಾಗಿ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್, ಮುಧೋಳ ಇವರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಹಾಗೂ ನೋಂದಣಿಯನ್ನು ಮಾಡದೆ ಆತುರಾತುರವಾಗಿ ತರಾತುರಿಯಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿ ಕಾಲಹರಣ ಮಾಡಿದರೆ ಹೊರತು ಗುತ್ತಿಗೆ ಒಪ್ಪಂದದ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಕಾರ್ಖಾನೆ ಪುನಃ ಮುಚ್ಚುವ ಸ್ಥಿತಿಗೆ ಬಂದಿತ್ತು . ಆ ಮೂಲಕ ಈ ಭಾಗದ ರೈತರ ಹಿತವನ್ನು ಮತ್ತೊಮ್ಮೆ ಬಲಿಕೊಡಲಾಯಿತು.
ನಾನು ಈ ಕ್ಷೇತ್ರದ ಮತದಾರರ ಆರ್ಶಿವಾದವನ್ನು ಪಡೆದು ಶಾಸಕನಾಗಿ ಆಯ್ಕೆಯಾದ ನಂತರ ದಿನಾಂಕ 05-01-2024 ರಲ್ಲಿ ಸರ್ಕಾರಕ್ಕೆ ಪತ್ರ ಬರೆದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಹಾಗೂ ಮಾನ್ಯ ಸಕ್ಕರೆ ಸಚಿವರಾದ ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ್ ರವರನ್ನು ಹತ್ತಾರು ಬಾರಿ ಬೇಟಿಮಾಡಿ ಈ ಭಾಗದ ಕಬ್ಬು ಬೆಳೆಗಾರರ ಪರವಾಗಿ ನಾನೇ ಮನವಿ ಮಾಡಿದಲ್ಲದೆ ಸಕ್ಕರೆ ಕಾರ್ಖಾನೆಯನ್ನು ಆರಂಬಿಸಲು ಇರುವ ಕಾನೂನಾತ್ಮಕವಾಗಿ ಗುತ್ತಿಗೆ ಮಾಡಿಕೊಡಿ ಎಂದು ಒತ್ತಾಯ ಕೂಡ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಸಕ್ಕರೆ ಸಚಿವರಿಗೆ ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಪಯತ್ನ ಪಟ್ಟಿದ್ದೆ. ಅಂದು ಸಕ್ಕರೆ ಸಚಿವರು ಸದ್ಯದಲ್ಲೆ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ಸಕಾರಾತ್ಮಕವಾಗಿ ಉತ್ತರಿಸಿ ಭರವಸೆ ನೀಡಿದ್ದರು ಅವರು ಕೊಟ್ಟ ಭರವಸೆ ಈಡೇರಿಸಿದ್ದಾರೆ ಎಂದಿದ್ದಾರೆ.
ಇದರ ಫಲವಾಗಿ ಇದೀಗ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಲಿಮಿಟೆಡ್ ಮುಧೋಳ ಇವರ ಜೊತೆಗೆ ಹೊಸದಾಗಿ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಈಗಾಗಲೇ ನಾನು ನಿರಾಣಿ ಶುಗರ್ಸ್ ಲಿಮಿಟೆಡ್ ಮಾಲೀಕರ ಬಳಿ ಕೂಲಂಕುಶವಾಗಿ ಚರ್ಚಿಸಿದ್ದೇನೆ. ಕಾಲಮಿತಿಯೊಳಗೆ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಯನ್ನು ನಿಯಾಮಾನುಸಾರ ಪೂರ್ಣಗೊಳಿಸಲು ತಿಳಿಸಿದ್ದೇನೆ. ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆ ಮುಗಿದ ನಂತರ ಶೀಘ್ರದಲ್ಲೆ ಕಾರ್ಖಾನೆ ಪುನರ್ ಪ್ರಾರಂಭ ಮಾಡುವ ಮೂಲಕ ಈ ಭಾಗದ ರೈತರ ಹಾಗೂ ಕಬ್ಬು ಬೆಳೆಗಾರರ ಹಿತವನ್ನು ಕಾಪಾಡಲು ನಾನು ಬದ್ಧನಾಗಿರುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಮನವಿಗೆ ಸ್ಪಂದಿಸಿ ಈ ಭಾಗದ ರೈತರ ಹಿತ ಕಾಯುವಂತಹ ಸ್ವಾಗತಾರ್ಹ ತೀರ್ಮಾನವನ್ನು ತೆಗೆದುಕೊಂಡಂತಹ ನಮ್ಮ ಘನ ಸರ್ಕಾರಕ್ಕೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಇದಕ್ಕೆ ಸಹಮತ ನೀಡಿದ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ರವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ. ಮಹದೇವಪ್ಪ ನವರಿಗೆ ನಮ್ಮ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ. ” ಶಾಸಕ ಡಿ.ರವಿಶಂಕರ್ ಅವರಿಗೆ ರೈತರ ಪರವಾಗಿ ಅಭಿನಂದನೆ ” ಈ ಭಾಗದ ರೈತರ ಜೀವನಾಡಿಯಾಗಿರುವ ಈ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿರುವ ಶಾಸಕ ಡಿ.ರವಿಶಂಕರ್ ಅವರನ್ನು ಕಾರ್ಖಾನೆ ವ್ಯಾಪ್ತಿಯ ರೈತರ ಪರವಾಗಿ ಅಭಿನಂಧಿಸುವುದಾಗಿ ಸಾಲಿಗ್ರಾಮ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದಮ್ಮನಹಳ್ಳಿ ಉದಯಶಂಕರ್ ತಿಳಿಸಿದ್ದಾರೆ.