Saturday, April 19, 2025
Google search engine

Homeರಾಜ್ಯಸುದ್ದಿಜಾಲನಗರದ ಸ್ವಚ್ಚತೆಗಾಗಿ ಸ್ವಚ್ಚತಾ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕು : ಶಾಸಕ ಸಿ. ಪುಟ್ಟರಂಗಶೆಟ್ಟಿ

ನಗರದ ಸ್ವಚ್ಚತೆಗಾಗಿ ಸ್ವಚ್ಚತಾ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕು : ಶಾಸಕ ಸಿ. ಪುಟ್ಟರಂಗಶೆಟ್ಟಿ


ಚಾಮರಾಜನಗರ: ನಗರ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ನಮ್ಮ ಮನೆ, ನಮ್ಮ ಬೀದಿ, ನಮ್ಮ ನಗರ ಎನ್ನುವ ಸಾಮೂಹಿಕ ಸ್ವಚ್ಚತಾ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಆಗಮಾತ್ರ ನಗರ, ಪಟ್ಟಣಗಳು ಸ್ವಚ್ಚ, ಸುಂದರ ನಗರಗಳಾಗಲು ಸಾಧ್ಯವಾಗಲಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರಸಭಾ ವ್ಯಾಪ್ತಿಯ ರಾಮಸಮುದ್ರದ ೨೯ ವಾರ್ಡ್ನ ಸುಬೇದಾರ್ ಕಟ್ಟೆ ಬಳಿ ಇಂದು ಸ್ವಚ್ಚ ಸರ್ವೇಕ್ಷಣ್-೨೦೨೪ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮಾಡಿಕೊಡಲು ಹಸಿಕಸ, ಒಣಕಸದ ಡಸ್ಟ್ ಬಿನ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರ, ಪಟ್ಟಣಗಳು ಸ್ವಚ್ಚತೆಯಿಂದ ಕೂಡಿರಲು ಅಲ್ಲಿನ ನಾಗರಿಕರಾದ ನಾವೆಲ್ಲರೂ ಸ್ವಚ್ಚತಾ ನಿಯಮಗಳನ್ನು ಪಾಲಿಸಬೇಕು. ಸ್ವಚ್ಚತೆಯ ಅರಿವು ಪ್ರತಿಯೊಬ್ಬರಲ್ಲೂ ಬರಬೇಕು. ಅದರಲ್ಲೂ ಮಹಿಳೆಯರು ಸ್ವಚ್ಚತೆ ಬಗ್ಗೆ ಹೆಚ್ಚು ಜಾಗೃತರಾಗಬೇಕು. ನಮ್ಮ ನೆರೆಜಿಲ್ಲೆ ಮೈಸೂರು ಸ್ವಚ್ಚತೆಗೆ ಹೆಸರು ಮಾಡಿದೆ. ಅದೇ ಮಾದರಿಯಲ್ಲಿ ನಾವು ಸಹ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಮಹಿಳೆಯರು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚತೆಗೆ ಮುಂದಾಗಬೇಕು. ಪರಿಸರ ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಗಳ ತಡೆ ಸಾಧ್ಯವಾಗಲಿದೆ. ಬಯಲು ಶೌಚಮುಕ್ತ ನಗರವಾಗಲು ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಬೇಕು. ನಗರದ ಸ್ವಚ್ಚತೆ ಕಾಪಾಡುವುದು ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ನಗರದ ಅಭಿವೃದ್ಧಿಗಾಗಿ ನಗರಸಭೆಗೆ ಹೆಚ್ಚಿನ ಅನುದಾನ, ಸಂಪನ್ಮೂಲ ಕ್ರೋಢೀಕರಣ ಅವಶ್ಯವಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ಅನುದಾನ, ೧೨, ೧೩, ೧೫ನೇ ಹಣಕಾಸು, ಶಾಸಕರು, ಸಂಸದರ ನಿಧಿ ಹಾಗೂ ಇತರೆ ಯೋಜನೆಗಳ ಅನುದಾನಗಳಿಂದ ನಗರಾಭಿವೃದ್ಧಿ ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ನಾಗರಿಕರು ಕಡ್ಡಾಯವಾಗಿ ನೀರು ಹಾಗೂ ಮನೆ ಕಂದಾಯ ಪಾವತಿಸುವುದರಿಂದ ನಗರಸಭೆಗೆ ಹೆಚ್ಚಿನ ತೆರಿಗೆ ಸಂಗ್ರಹವಾಗಲಿದೆ. ಇದರಿಂದ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಮೂಲಸೌಲಭ್ಯಗಳನ್ನು ನಗರವಾಸಿಗಳಿಗೆ ನೀಡಲು ಅನುಕೂಲವಾಗಲಿದೆ ಎಂದು ಶಾಸಕರು ಹೇಳಿದರು.

ಚಾಮರಾಜನಗರ ಪಟ್ಟಣದ ಅಭಿವೃದ್ಧಿಗೆ ೨೦೧೩ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೫೦ ಕೋಟಿ ಅನುದಾನ ನೀಡಿ ವಿಶೇಷ ಪ್ಯಾಕೇಜ್ ಘೋಷಿಸಿದ್ದನ್ನು ಸ್ಮರಿಸಿದ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ನಗರಸಭಾ ವ್ಯಾಪ್ತಿಯಲ್ಲಿ ೩೧ ವಾರ್ಡ್ಗಳಿದ್ದು, ಸಮರ್ಪಕ ಒಳಚರಂಡಿ ಕಾಮಗಾರಿಗೆ ೧೨೦ ಕೋಟಿ ರೂ. ಅನುದಾನದ ಅಗತ್ಯವಿದೆ. ಮುಖ್ಯಮಂತ್ರಿಯವರು ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ನಗರಸಭೆ ವ್ಯಾಪ್ತಿಯ ಮೂಲಸೌಕರ್ಯವಂಚಿತ ವಿವಿಧ ಬಡಾವಣೆಗಳು ಅಭಿವೃದ್ಧಿ ಕಾಣಲಿವೆ ಎಂದರು.

ಕುಡಿಯುವ ನೀರಿಗೆ ೧೦೯ ಕೋಟಿ ಅನುದಾನ ಬಂದಿತ್ತು. ಪ್ರಸ್ತುತ ೮೯ ಕೋಟಿ ರೂ.ಗಳ ಟೆಂಡರ್ ಅನುಮೋದನೆಯಾಗಿದೆ. ೧೮೦ ಕೋಟಿ ರೂ. ವೆಚ್ಚದಲ್ಲಿ ಮಾಲಂಗಿಯಿAದ ಕುಡಿಯುವ ನೀರು ಯೋಜನೆಗೆ ಅನುದಾನ ಬಿಡುಗಡೆ ಮಾಡುವುದಾಗಿ ನಗರಾಭಿವೃದ್ಧಿ ಸಚಿವರು ತಿಳಿಸಿದ್ದಾರೆ. ಸದ್ಯದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಇನ್ನುಳಿದಂತೆ ೩೮-೪೦ ಕೋಟಿ ರೂ. ವೆಚ್ಚದಲ್ಲಿ ಬಸ್‌ನಿಲ್ದಾಣ ನಿರ್ಮಾಣವಾಗಲಿದೆ. ಇವೆಲ್ಲವೂ ನಗರದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರಸಭಾ ಅಧ್ಯಕ್ಷರಾದ ಎಸ್. ಸುರೇಶ್ ಅವರು ಮಾತನಾಡಿ ಸ್ವಚ್ಚಭಾರತ್ ಅಭಿಯಾನದಡಿ ಮನೆಮನೆ ಕಸ ಸಂಗ್ರಹಣೆಗಾಗಿ ಹಸಿಕಸ, ಒಣಕಸದ ತ್ಯಾಜ್ಯ ವಿಂಗಡಣೆ ಮಾಡಿಕೊಡಲು ಡಸ್ಟ್ಬಿನ್ ವಿತರಣಾ ಕಾರ್ಯಕ್ರಮವನ್ನು ೨೯ನೇ ವಾರ್ಡ್ನಿಂದ ಹಮ್ಮಿಕೊಳ್ಳಲಾಗಿದ್ದು, ನಗರವಾಸಿಗಳು ಸ್ವಚ್ಚತೆಗೆ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.

ನಗರಸಭಾ ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ ೩೧ ವಾರ್ಡ್ಗಳಿಂದ ೨೦ ಟನ್ ಕಸ ಸಂಗ್ರಹವಾಗುತ್ತಿದ್ದು, ಪ್ರತಿ ಮನೆಮನೆಗಳಲ್ಲಿನ ಮೂಲತ್ಯಾಜ್ಯ ನಿರ್ವಹಣೆಗಾಗಿ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ ಮನೆಬಾಗಿಲಿಗೆ ಬರುವ ನಗರಸಭೆಯ ಕಸಸಂಗ್ರಹಣೆಯ ವಾಹನಕ್ಕೆ ನೀಡಬೇಕು. ಇದಕ್ಕಾಗಿ ಹಸಿರು ಬಣ್ಣದ ಹಸಿಕಸ ಡಬ್ಬಿ ಹಾಗೂ ನೀಲಿ ಬಣ್ಣದ ಒಣಕಸ ಡಬ್ಬವನ್ನು ಇಂದು ಸಾಂಕೇತಿಕವಾಗಿ ವಿತರಿಸಲಾಗುತ್ತಿದೆ. ನಗರದ ಸ್ವಚ್ಚತೆಗೆ ನಾಗರಿಕರು ಕೈಜೋಡಿಸುವಂತೆ ಮನವಿ ಮಾಡಿದರು.

ನಗರಸಭಾ ಉಪಾಧ್ಯಕ್ಷರಾದ ಮಮತ, ೨೯ನೇ ವಾರ್ಡ್ ಸದಸ್ಯರಾದ ಎಂ.ವಿ. ಸುಧಾ ಅವರು ಮೂಲತ್ಯಾಜ್ಯ ನಿರ್ವಹಣೆಗಾಗಿ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ ನೀಡುವುದರ ಉಪಯೋಗಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ ನೀಡುವ ಹಸಿರು ಹಾಗೂ ನೀಲಿ ಬಣ್ಣದ ಒಣಕಸ ಡಬ್ಬವನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ನಗರಸಭೆಯ ಯೋಜನಾಧಿಕಾರಿ ವೆಂಕಟ್‌ನಾಯಕ್, ಸಹಾಯಕ ಕಾರ್ಯಪಾಲಕ ಪರಿಸರ ಅಭಿಯಂತರರಾದ ರೂಪ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ, ನಾರಾಯಣ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular