ಗುಂಡ್ಲುಪೇಟೆ: ತಾಲೂಕಿನ ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಮಾಂಸಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಮಾಹಿತಿ ಅರಿತ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಂಗಳವಾರ ಮೊರಾರ್ಜಿ ಶಾಲೆ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಣೆ ನಡೆಸಿದರು.
ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಧ್ಯಾಪಕರು, ಶುಶ್ರೂಷಕಿ ಮತ್ತು ಅಡುಗೆಯವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಂಸದ ಅಡುಗೆಗೆ ತಂದಿದ್ದ ಚಿಕನ್ ಗುಣಮಟ್ಟದಿಂದ ಕೂಡಿರಲಿಲ್ಲ ಎಂಬ ಆರೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮವಾಗಿಲ್ಲದ ಮೇಲೆ ಅಡುಗೆ ಏಕೆ ತಯಾರಿಸಿದ್ದೀರಾ ಎಂದು ಮಾಜಿ ಶಾಸಕರು ಪ್ರಶ್ನಿಸಿದರು.
ಖಾರ ಜಾಸ್ತಿ ಇತ್ತು. ಕೆಲವು ಮಕ್ಕಳಿಗಷ್ಟೆ ಈಗಾಗಿದೆ ಎಂಬ ಸಮರ್ಥನೆಯನ್ನು ಮಾಜಿ ಶಾಸಕರು ಒಪ್ಪಿಕೊಳ್ಳಲಿಲ್ಲ. ಪ್ರಾಂಶುಪಾಲರು, ಅಧ್ಯಾಪಕರು, ಭದ್ರತಾ ಸಿಬ್ಬಂದಿ, ಶುಶ್ರೂಷಕರು ಇಲ್ಲಿರುವ ವ್ಯವಸ್ಥೆ ನಂಬಿ ಪೋಷಕರು ಮಕ್ಕಳನ್ನು ಕಳುಹಿಸಿರುತ್ತಾರೆ. ಗಟ್ಟು ಮುಟ್ಟಾದ ಮಕ್ಕಳಿಗೆ ಏನು ಆಗಿರಲ್ಲ. ಈ ಕಾರಣಕ್ಕೆ ಘಟನೆ ಗಂಭೀರವಾಗಿದ್ದರೂ ಸಮರ್ಥನೆ ಮಾಡಿಕೊಳ್ಳುತ್ತೀರಿ. ಏನಾದರೂ ವ್ಯತ್ಯಾಸವಾದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದರು. ಮತ್ತೆ ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸಿ ಎಂದು ಸೂಚನೆ ನೀಡಿದರು.
ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಬಿಸಿ ನೀರು ಸೇರಿದಂತೆ ಗುಣಮಟ್ಟದಿಂದ ಅಡುಗೆ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಬೇಕು. ಮುಂದೆ ಲೋಪದೋಷ ಕಂಡು ಬಂದರೆ ಅದಕ್ಕೆ ನೀಔಏನೇರ ಹೊಣೆ ಎಂದು ಪ್ರಾಂಶುಪಾಲ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಕಮರಹಳ್ಳಿ ರವಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಿರೀಕಾಟಿ ಸೋಮಶೇಖರ್, ಮಂಡಲ ಅಧ್ಯಕ್ಷ ದೊಡ್ಡಹುಂಡಿಜಗದೀಶ್, ಮುಖಂಡ ಜಯರಾಜು ಸೇರಿದಂತೆ ಇತರರು ಹಾಜರಿದ್ದರು.