ನಂಜನಗೂಡು: ಯುವಕರು ದುಶ್ಚಟಗಳಿಂದ ದೂರವಿದ್ದು, ದೇಹಕ್ಕೆ ಅಗತ್ಯವಾದ ವ್ಯಾಯಾಮವನ್ನು ನೀಡಲು ಕರಾಟೆಯಂತಹ ಆತ್ಮರಕ್ಷಣಾ ಕಲೆಯನ್ನು ಕಲಿಯಬೇಕು ಎಂದು ಸಮುದ್ರ ಇಂಗ್ಲೀಷ್ ಶಾಲೆಯ ಕಾರ್ಯದರ್ಶಿ ಡಾ.ಶ್ರೀಕಾಂತ್ ಹೇಳಿದರು.
ನಗರದ ನಂದಿ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಬೇಸಿಗೆ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಇಂದಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಅಗತ್ಯ. ಶಾಲಾ ಮಕ್ಕಳಿಗೆ, ಮುಖ್ಯವಾಗಿ ಬಾಲಕಿಯರಿಗೆ, ಕರಾಟೆ ತರಬೇತಿ ಕಡ್ಡಾಯವಾಗಬೇಕು” ಎಂದರು.
ಈ ತರಬೇತಿಯ ಮೂಲಕ ಮಕ್ಕಳು ಆರೋಗ್ಯವಂತರು ಆಗುವುದರ ಜೊತೆಗೆ ದೈಹಿಕವಾಗಿ ಸದೃಢರಾಗುತ್ತಾರೆ. ಇದರಿಂದ ಅವರ ವ್ಯಕ್ತಿತ್ವವಿಕಾಸವೂ ಸಾಧ್ಯವಾಗುತ್ತದೆ ಮತ್ತು ಅವರು ಭವಿಷ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಬಲ್ಲರು ಎಂದು ಅವರು ಅಭಿಪ್ರಾಯಪಟ್ಟರು.
ನಗರದ ರೆನ್ಸಿ ಭರತೇಶ್ ಅವರ ಕರಾಟೆ ಶಾಲೆಯು ಉತ್ತಮ ತರಬೇತಿಯನ್ನು ನೀಡುತ್ತಿದ್ದು, ಈ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು. “ಪಟುಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಬೆಳೆಸಬೇಕು,” ಎಂಬ ಸಂದೇಶವನ್ನು ಅವರು ಕೊಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್.ಸುನೀಲ್ ಕುಮಾರ್ ಅವರು ತರಬೇತಿ ಪಡೆದ ಪಟುಗಳನ್ನು ಸ್ಮರಣ ಫಲಕ ನೀಡಿ ಸನ್ಮಾನಿಸಿದರು. ಕರಾಟೆ ಪಟುಗಳು ಕಥಾಶ್ ಪ್ರದರ್ಶನ ನೀಡಿದರು.
ಈ ಸಮಾರಂಭದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಉಮೇಶ್, ನಗರಸಭಾ ಸದಸ್ಯ ಪ್ರೊ.ಮಹೇಶ್ ಅತ್ತಿಖಾನೆ, ಡಾ.ಪವನ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.