ಬೆಂಗಳೂರು: ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಬಹುಮಾನಾತ್ಮಕ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಅವರನ್ನು ಅಭಿನಂದಿಸಿದೆ.
KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಹಾಸನದಲ್ಲಿ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಸಾಧನೆಗೆ ಗೌರವ ಸೂಚಿಸಿ ‘ಅಮೃತ ಬೀಜ’ ಕೃತಿ ನೀಡಿ ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಅವರು, “ಬಾನು ಮುಷ್ತಾಕ್ ಹಾಸನದಿಂದ ಪತ್ರಿಕೋದ್ಯಮದ ಜೊತೆಗೆ ವಕೀಲರಾಗಿ, ನಗರಸಭೆ ಸದಸ್ಯರಾಗಿ ಹಾಗೂ ಪ್ರಗತಿಪರ ಸಾಹಿತಿಯಾಗಿ ಗುರುತಿಸಿಕೊಂಡವರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಹೆಮ್ಮೆಯ ಮಹಿಳೆ. ಅವರ ‘ಹಾರ್ಟ್ ಲ್ಯಾಂಪ್’ ಅಂತಾರಾಷ್ಟ್ರೀಯ ಪಠಕವರ್ಗವನ್ನು ತಲುಪಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ,” ಎಂದರು.
ದಿಗ್ಗಜ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಹಸೀನಾ ಚಲನಚಿತ್ರವೂ ಬಾನು ಮುಷ್ತಾಕ್ ಅವರ ಕಥೆಗಳಿಂದಲೇ ಪ್ರೇರಿತವಾಗಿದೆ. ಈ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ, ಹಾಸನದಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ಶಿವಾನಂದ ತಗಡೂರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್. ಮಂಜುನಾಥ್ ಹಾಗೂ ಔಟ್ ಲುಕ್ ಪತ್ರಿಕೆಯ ವರದಿಗಾರ ವಿಕಾರ್ ಅಹಮದ್ ಉಪಸ್ಥಿತರಿದ್ದರು.