ಗುಂಡ್ಲುಪೇಟೆ: ಪಟ್ಟಣದ ಅಮೀರ್ ಜಾನ್ ರಸ್ತೆಯಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ಪುರಸಭೆ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗದಿರುವ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಅಮೀರ್ ಜಾನ್ ರಸ್ತೆಯು ಪ್ರಮುಖ ಜನನಿಬಿಡ ಪ್ರದೇಶವಾಗಿದ್ದು, ಕಸದ ರಾಶಿ ಬಿದ್ದಿದ್ದರು ಸಹ ಪುರಸಭೆಯವರು ತೆರವಿಗೆ ಮುಂದಾಗದಿರುವ ಹಿನ್ನೆಲೆ ಪ್ರಸ್ತುತ ಮಳೆ ಬೀಳುತ್ತಿರುವ ಕಾರಣ ತ್ಯಾಜ್ಯ ಕೊಳೆತು ನಾರುತ್ತಿದೆ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಜೊತೆಗೆ ಸಮರ್ಪಕವಾಗಿ ಕಸ ತೆರವಿಗೆ ಪುರಸಭೆ ಮುಂದಾಗದ ಹಿನ್ನಲೆ ಪಟ್ಟಣದ ಹಲವು ವಾರ್ಡ್ಗಳಲ್ಲಿ ಕಸರಾಶಿ ಬಿದ್ದಿಚದೆ. ಈ ಕಾರಣದಿಂದ ಪುರಸಭೆ ಆಡಳಿತ ವರ್ಗ ಹಾಗೂ ಸದಸ್ಯರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ವತಿಯಿಂದ ಪಟ್ಟಣ ವ್ಯಾಪ್ತಿಯ ಪ್ರತಿ ಮನೆಗಳಲ್ಲಿಯೂ ಕಸ, ನೀರು ಸೇರಿದಂತೆ ಇನ್ನಿತರ ತೆರಿಗೆ ಹಣವನ್ನು ಸಂಗ್ರಹ ಮಾಡುತ್ತಿದ್ದರೂ ಸಹ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ನಾಮಕಾವಸ್ಥೆಗೆ ಡಬ್ಬ ಅಳವಡಿಕೆ: ಪಟ್ಟಣ ವ್ಯಾಪ್ತಿಯ ವಿವಿಧ ವಾರ್ಡ್ ಹಾಗೂ ಪ್ರಮುಖ ಜನಸಂದಣಿ ಪ್ರದೇಶದಲ್ಲಿ ಕಸ ಸಂಗ್ರಹಕ್ಕೆ ಡಬ್ಬಿ ಅಳವಡಿಕೆ ಮಾಡಲಾಗಿದೆ. ಇವುಗಳು ತುಂಬಿದ್ದರು ಸಹ ಕಸ ಪುರಸಭೆಯವರು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಗಬ್ಬೆದ್ದು ನಾರುತ್ತಿದೆ. ಇದರಿಂದ ಜನರು ಅನಿವಾರ್ಯವಾಗಿ ಖಾಲಿ ಜಾಗ ಮತ್ತು ಕಾಂಪೌಂಡ್ ಬಳಿಯಲ್ಲಿ ಇಟ್ಟು ತೆರಳುತ್ತಿದ್ದಾರೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಸ್ವಚ್ಛತೆ ಆದ್ಯತೆ ನೀಡುವ ಮೂಲಕ ಪಟ್ಟಣ ವ್ಯಾಪ್ತಿಯಲ್ಲಿ ಬಿದ್ದಿರುವ ಕಸದ ರಾಶಿಗಳನ್ನು ತೆರವು ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್ ಒತ್ತಾಯಿಸಿದ್ದಾರೆ.