ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 17ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.
ನೀಟ್ ಪರೀಕ್ಷೆಯ 720 ಅಂಕಗಳಲ್ಲಿ 670 ಅಂಕಗಳನ್ನು ಪಡೆದಿರುವ ನಿಖೀಲ್, ಹೊಸ ದಿಲ್ಲಿಯ ಏಮ್ಸ್ನಲ್ಲಿ ಎಂಬಿಬಿಎಸ್ಗೆ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ನಿಖಿಲ್, ವಿಜಾಪುರದ ನ್ಯೂರೋ ಸರ್ಜನ್ ಡಾ| ಸಿದ್ದಪ್ಪ ಸೊನ್ನದ್ ಹಾಗೂ ವಿಜಯಪುರದ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ| ಮೀನಾಕ್ಷಿ ಅವರ ಪುತ್ರ. ಇವರು ಇತ್ತೀಚೆಗೆ ಪ್ರಕಟವಾದ ಸಿಇಟಿಯ ಕೃಷಿ ವಿಷಯದಲ್ಲಿ 8ನೇ ರ್ಯಾಂಕ್ ಪಡೆದಿದ್ದರು.
“ನೀಟ್ ಅಥವಾ ಸಿಇಟಿ ಬರೆಯಲೇಬೇಕು ಎಂದು ಉದ್ದೇಶವಿರಿಸಿ ನಾನು ಸಿದ್ಧತೆ ಮಾಡಿರಲಿಲ್ಲ. ಯಾವುದು ಮಾಡಿದರೂ ಜ್ಞಾನ ಸಂಪಾದನೆಯೇ ನನ್ನ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ನೀಟ್ ಫಲಿತಾಂಶದಲ್ಲಿ ಒಳ್ಳೆಯ ರ್ಯಾಂಕ್ ಪಡೆಯಲು ಸುಲಭವಾಯಿತು. ಮೊದಲು ಜ್ಞಾನ ಆ ಬಳಿಕ ರ್ಯಾಂಕ್ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಅವರು.“ನೀಟ್ನಲ್ಲಿ 100 ರ್ಯಾಂಕ್ನೊಳಗೆ ಬರುವ ನಿರೀಕ್ಷೆ ಇತ್ತು. 17ನೇ ರ್ಯಾಂಕ್ ಬಂದಿರುವುದು ತುಂಬ ಖುಷಿ ತಂದಿದೆ. ಪ್ರತಿದಿನ 3 ಗಂಟೆಯ ಅಧ್ಯಯನ, ಸ್ಟಡಿ ಅವರ್ನ ಪರಿಪೂರ್ಣ ಬಳಕೆ ಹಾಗೂ ಎನ್ಸಿಇಆರ್ಟಿಯ ಪಠ್ಯಕ್ರಮದ ಬಳಕೆಯಿಂದ ರ್ಯಾಂಕ್ ಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ನಿಖಿಲ್.