ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನುಡಿದಂತೆ ನಡೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿ ದೇಶಕ್ಕೆ ಮಾದರಿ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ ಎಸ್.ಮಹದೇವ್ ಹೇಳಿದರು.
ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಅರಿವು ಶಿಬಿರದಲ್ಲಿ ಮಾತನಾಡಿದ ಅವರು ಜನರ ಬಯಕೆಯಂತೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜನ ಪರವಾದ ಆಡಳಿತ ನಡೆಸುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ನಂತರ ಅವುಗಳ ಪರಿಣಾಮಕಾರಿ ಜಾರಿಗೆ ಪ್ರಾಧಿಕಾರ ರಚನೆ ಮಾಡಿ ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದು ನಮ್ಮ ಸರ್ಕಾರದ ಇಂತಹ ಕೆಲಸಗಳಿಂದ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ತಲುಪದಿದ್ದವರು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಳಿಗೆ ದೂರು ನೀಡಿ ಅವರಿಂದ ಪರಿಹಾರ ದೊರೆಯದಿದ್ದಲ್ಲಿ ಅನುಷ್ಠಾನ ಪ್ರಾಧಿಕಾರ ಮತ್ತು ತಾಲೂಕು ಆಡಳಿತದ ಗಮನಕ್ಕೆ ತರಬೇಕೆಂದು ಸಲಹೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೊಣೆ ಹೊತ್ತಿರುವ ಅಧಿಕಾರಿಗಳು ಜವಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡಿ ಈ ಸಂಬಂದ ಯಾವುದೇ ಸಮಸ್ಯೆಗಳಿದ್ದರು ನಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದ ಅಧ್ಯಕ್ಷರು ನಿಮಗೆ ಸಹಕಾರ ನೀಡಲು ನಾವು ಸದಾ ಸಿದ್ದವೆಂದು ಪ್ರಕಟಿಸಿದರು.
ಸಾಲಿಗ್ರಾಮ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಉದಯಶಂಕರ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿದ್ದು ಈ ಬಗ್ಗೆ ಜನರು ಸಂತೃಪ್ತ ಭಾವನೆ ಹೊಂದಿದ್ದು ಸರ್ಕಾರದ ಈ ಜನಪರವಾದ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಅಧ್ಯಕ್ಷರು, ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಗ್ರಾಮದ ಕೆಲವು ಮನೆಗಳಿಗೆ ತೆರಳಿ ಗ್ಯಾರಂಟಿ ಯೋಜನೆಯ ಪಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಅನುಕೂಲದ ಬಗ್ಗೆ ತಿಳಿದುಕೊಂಡರು.
ಬ್ಯಾಡರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಈರಮ್ಮಸಣ್ಣಯ್ಯ, ಸದಸ್ಯ ಬಿ.ಎಲ್ಪ್ರಾಣೇಶ್, ಚಂದ್ರೇಗೌಡ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸೈಯದ್ ಜಾಬೀರ್, ಲತಾ, ಡಿ ಎಸ್. ಕುಮಾರ್, ಜಯಮ್ಮ, ಯತಿರಾಜು, ಮೋಹನ್, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್, ಸೆಸ್ಕಾಂ ಎಇಇ ಅರ್ಕೇಶ್ ಮೂರ್ತಿ, ಪಿಡಿಒ ಮಹೇಶ್, ಆಹಾರ ಶಿರಸ್ತೇದಾರ್ ಮಂಜುನಾಥ್, ನಿರೀಕ್ಷಕರಾದ ಡಿ.ಆರ್. ಕುಮಾರ್, ಕೆ.ಪಿ. ಸುರೇಶ್, ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಗಾಯತ್ರಿ, ಕೆಎಸ್ಆರ್ ಟಿಸಿ ಸಂಚಾರ ನಿಯಂತ್ರಕ ಗುರುಲಿಂಗಯ್ಯ ಭಾರಗಣಿ, ತಾ.ಪಂ.ವ್ಯವಸ್ಥಾಪಕ ಕರೀಗೌಡ, ಕಾಂಗ್ರೆಸ್ ಮುಖಂಡ ರಾಮಾಚಾರಿ ಮತ್ತಿತರರು ಇದ್ದರು.