ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಬೇಕಿರುವ 16 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ, ಖಾಸಗಿ ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಅನುದಾನದಡಿ ಈ 16 ಶಾಲೆಗಳನ್ನು ಅಥವಾ ಖಾಸಗಿ ಸಂಸ್ಥೆಗಳು ಇಚ್ಛಿಸುವ ಯಾವುದಾದರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು (ಜೂನ್.20) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಿ.ಎಸ್.ಆರ್ ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕಂಪನಿ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಖಾಸಗಿ ಸಂಸ್ಥೆಗಳು ಸಿ.ಎಸ್.ಆರ್ ಅಭಿವೃದ್ಧಿ ಪಡಿಸುವ ಶಾಲಾ ಕೊಠಡಿಗಳು ನಾಮಫಲಕದಲ್ಲಿ ಸಂಸ್ಥೆಯ ಹೆಸರು ಹಾಕಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಗುರುತಿಸಲಾಗಿರುವ 16 ಶಾಲೆಗಳನ್ನು ಯಾವ ಸಂಸ್ಥೆಯವರು ಯಾವ ಶಾಲೆಗಳನ್ನು ವಹಿಸಿಕೊಳ್ಳುತ್ತಿದ್ದಾರೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಖಾಸಗಿ ಸಂಸ್ಥೆಗಳು ಶಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ವಹಿಸಿಕೊಂಡ ನಂತರ ಯಾವುದೇ ವಿಳಂಬ ಮಾಡದೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಮಾರಗೌಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸೂಕ್ತವಾಗಿ ಊಟ ಮಾಡಲು ಚಾವಣಿ ನಿರ್ಮಿಸಲಾಗಿದೆ ಆದರೆ ಕುಳಿತುಕೊಂಡು ಊಟ ಮಾಡಲು ಸರಿಯಾದ ಫ್ಲೋರ್ ವ್ಯವಸ್ಥೆ ಇಲ್ಲ, ಅಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಊಟ ಮಾಡಲು ಸರಿಯಾದ ಫ್ಲೋರ್ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಸಿ.ಎಸ್.ಆರ್ ಅನುದಾನದ ಮೂಲಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್, ತಂತ್ರಜ್ಞಾನದ ಉಪಕರಣಗಳು, ನೋಟ್ ಬುಕ್ಸ್ ನೀಡಬೇಡಿ, ಅವೆಲ್ಲವನ್ನು ಸರ್ಕಾರವೇ ನೀಡಲಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದ ಶಾಲೆಗಳು, ದುರಸ್ಥಿ ಗೊಳಿಸಬೇಕಾಗಿರುವ ಶಾಲೆಗಳು, ಕಾಂಪೌoಡ್ ಇಲ್ಲದ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಿ ಕೊಡಿ, ಸಿ.ಎಸ್.ಆರ್ ಅನುದಾನದಡಿ ಅವುಗಳನ್ನು ಅಭಿವೃದ್ಧಿ ಪಡಿಸಲಾಗುವುದು, ಕಾಂಪೌoಡ್ ನಿರ್ಮಿಸಿದ ನಂತರ ಸಾಹಿತ್ಯಕ್ಕೆ ಸಂಬoಧಿಸಿದ ಚಿತ್ರಗಳು ಹಾಗೂ ಅಭಿವೃದ್ಧಿ ಪಡಿಸಿದ ಸಂಸ್ಥೆ ಹೆಸರನ್ನು ಕಾಂಪೌoಡ್ ನಲ್ಲಿ ಬರೆಸಿ ಎಂದು ಹೇಳಿದರು.
ಮುಟ್ಟಿನ ಕಪ್ ( menstrual cup ) ಅಭಿಯಾನ
ಖಾಸಗಿ ಕಂಪನಿಗಳು ನಿಮ್ಮ ಕಂಪನಿಯ 5 ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಸಿ.ಎಸ್.ಆರ್ ಅನುದಾನದ ಮೂಲಕ ಅಲ್ಲಿನ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಮುಟ್ಟಿನ ಕಪ್ ಅನ್ನು ನೀಡಿ “ಪ್ಯಾಡ್ ಮುಕ್ತ ಗ್ರಾಮ ಪಂಚಾಯಿತಿ”ಯನ್ನಾಗಿ ಮಾಡಿ ಎಂದರು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಮುಟ್ಟಿನ ಸಂದರ್ಭದಲ್ಲಿ ದೀರ್ಘಕಾಲ ಶಾಲೆಗೆ ಕಳಿಸುವುದಿಲ್ಲ, ಇದರಿಂದ ಅವರ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತರೆ, ಪ್ಯಾಡ್ ಗಳನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಇದರ ಕುರಿತಾಗಿ ಜಾಗೃತಿ ಮೂಡಿಸಿ ಪ್ಯಾಂಟ್ ಬದಲು ಮುಟ್ಟಿನ ಕಪ್ ಬಳಸಲು ಜಾಗೃತಿ ಮೂಡಿಸಿ ಎಂದು ಹೇಳಿದರು.
ಸಭೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಟಿ. ಸೌಭಾಗ್ಯ, ಚಂದ್ರಕಾoತ್, ಉಮಾ, ಚಂದ್ರಶೇಖರ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಮುಖ್ಯಸ್ಥರುಗಳು ಉಪಸ್ಥಿತರಿದ್ದರು.