ಮೈಸೂರು: ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ವಚನಗಳು ಆಧಾರವಾಗಿದ್ದು, ವಚನಗಳು ಸಾರುವ ಶ್ರೇಷ್ಠ ಸಂದೇಶಗಳ ಮೇಲೆ ನಾಡು ನಿಂತಿದೆ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಫ.ಗು.ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನಗಳ ಸಂರಕ್ಷಣೆಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದೆ. ಮಠಗಳಲ್ಲಿ ವಚನಗಳ ಮೂಲಕ ಆಶೀರ್ವಚನ ಮಾಡುತ್ತಾರೆ. ಇದರಿಂದ ವಚನಗಳ ಶ್ರೇಷ್ಠತೆಯನ್ನು ನಾವು ಅರಿಯಬೇಕಿದೆ. ವಚನಗಳನ್ನು ನಶಿಸಿ ಹೋಗಲು ಬಿಡಬಾರದು. ಬದಲಾಗಿ ಮುಂದಿನ ಪೀಳಿಗೆಯಲ್ಲಿ ವಚನಗಳ ಸಂರಕ್ಷಣೆಯ ಆದ್ಯತೆ ಅರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಶಿವಕುಮಾರ್, ಅಂದಿನ ಕಾಲದಲ್ಲಿಯೇ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಸಾಮಾಜಿಕ ದನಿಯಾಗಿದ್ದರು. ಆಚಾರ-ವಿಚಾರಗಳಿಗೆ ವಚನಗಳು ಸ್ಪೂರ್ತಿದಾಯಕವಾಗಿವೆ. ವಚನ ಸಾಹಿತ್ಯದ ಮಹತ್ವ ಅರಿಯಲು ಈ ರೀತಿಯ ವಿಚಾರ ಸಂಕಿರಣಗಳು ಸಹಾಯಕಾರಿಯಾಗಿವೆ ಎಂದು ತಿಳಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ವಿಜಯ್ ಕುಮಾರಿ ಕರಿಕಲ್ ಮಾತನಾಡಿ, ವಚನ ಸಾಹಿತ್ಯದ ಮೇರು ವ್ಯಕ್ತಿ, ತಮ್ಮ ಇಡೀ ಜೀವನವನ್ನೇ ವಚನ ಸಂರಕ್ಷಣೆಗಾಗಿ ಮುಡಿಪಿಟ್ಟ ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ವಚನ ಸಂರಕ್ಷಣಾ ದಿನಾಚರಣೆಯನ್ನಾಗಿ ಕಳೆದ ವರ್ಷದಿಂದ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವಾಗ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾಗಿ ೫೦ ವರ್ಷಗಳು ಕಳೆದಿವೆ. ಈ ಸಂಬಂಧ ಒಂದು ವರ್ಷ ಸಂಭ್ರಮಾಚರಣೆ ಮಾಡುವ ವಿಚಾರ ಪ್ರಸ್ತಾಪಿಸಿದರು. ಈ ವಿಚಾರ ಬಹಳ ಸಂತೋಷದಾಯಕ ಹಾಗೂ ಸ್ವಾಗತಾರ್ಹ. ಬಹುತೇಕ ಕನ್ನಡ ಕಟ್ಟುವ ಕೆಲಸಗಳು ಈ ರೀತಿಯದ್ದೇ. ಕನ್ನಡ ಪರ ಕೆಲಸಗಳಿಗಾಗಿ ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡಿದರೆ ಕನ್ನಡ ಪರ ಕೆಲಸ ಮಾಡಲು ಹಾಗೂ ಪರಿಣಾಮಕಾರಿಯ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಶಾಸಕರಿಗೆ ಕುವೆಂಪು ಕನ್ನಡ ಜನಸಂಸ್ಥೆಯ ಕನ್ನಡ ಅಧ್ಯಾಪಕರ ಸಂಘಟನೆ ವತಿಯಿಂದ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.