ನವದೆಹಲಿ: ರಾಜ್ಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳುವಂತೆ ಹಾಗೂ ಕರ್ನಾಟಕ ಸರ್ಕಾರ ಮಂಡಿಸಿದ ಹಲವಾರು ಮಹತ್ವಪೂರ್ಣ ಬಿಲ್ಲುಗಳಿಗೆ ಶೀಘ್ರ ಅನುಮೋದನೆ ದೊರಕಿಸಿಕೊಡಲು ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಸಿಎಂ ಸಿದ್ದರಾಮಯ್ಯ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನವದೆಹಲಿಯಲ್ಲಿ ಮನವಿ ಮಾಡಿದರು. ಅವರು ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಬಹಿರಂಗ ಪಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ವಾರದ ಹಿಂದೆ 16 ನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿದ್ದು, ಎರಡನೇ ಹೆಚ್ಚುವರಿ ಮನವಿಯನ್ನು ಕೊಟ್ಟು, 14 ನೇ ಹಣಕಾಸು ಆಯೋಗದಲ್ಲಿ 4.7% ಅಡ್ಡವಾಗಿ ತೆರಿಗೆ ಹಂಚಿಕೆಯಾಗಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.6% ಆಗಿದೆ. ಶೇಕಡಾ 1.1% ಕಡಿಮೆಯಾಗಿದ್ದು, ಇದು ಒಟ್ಟಾರೆ ಅನುದಾನ ಹಂಚಿಕೆಯಲ್ಲಿ ಶೇ. 23% ಗಿಂತಲೂ ಕಡಿಮೆಯಾಗಿದೆ. 5 ವರ್ಷಗಳಲ್ಲಿ ಒಟ್ಟು 80,000 ಕೋಟಿ ಕಡಿಮೆಯಾಗಿದೆ ಎಂಬ ಅಂಶವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 63 ಸಾವಿರ ಕೋಟಿ ಅನ್ಯಾಯವಾಗಿದೆ. ರಾಜ್ಯಕ್ಕೆ ವಿಶೇಷ ಅನುದಾನ ರೂ. 5,495 ಕೋಟಿ ಮೀಸಲಿಡಲಾಗಿತ್ತು. ಪೆರಿಫೆರಲ್ ರಿಂಗ್ ರೋಡ್ ಗೆ 3,000 ಕೋಟಿ, ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ರೂ. 3,000 ಕೋಟಿ ಸೇರಿದಂತೆ ಒಟ್ಟು 11,495 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಒಟ್ಟಾರೆಯಾಗಿ ರಾಜ್ಯಕ್ಕೆ 80,000 ಕೋಟಿ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ 5% ರಷ್ಟಿದೆ. ಕರ್ನಾಟಕ 8.7% ಜಿಡಿಪಿಗೆ ಕೊಡುಗೆ ನೀಡುತ್ತಿದ್ದೇವೆ. 2011-12ರಲ್ಲಿ 7.6% ಇದ್ದದ್ದು, ಈಗ 8.7% ಕೊಡುಗೆ ನೀಡುತ್ತಿದೆ. ದೇಶಕ್ಕೆ ಜಿಎಸ್ ಟಿ ಕೊಡುಗೆ ನೀಡುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜಿ.ಡಿ. ಪಿ ನಲ್ಲಿ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗಾಗಿ ಯಾವ ರಾಜ್ಯ ಹೆಚ್ಚು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೋರಲಾಗಿದೆ ಎಂದರು.
ತಲಾವಾರು ಆದಾಯವನ್ನು ಪರಿಗಣಿಸುವ ಮಾನದಂಡವನ್ನು ಶೇಕಡಾ 45 ರಿಂದ ಶೇಕಡಾ 20 ಕ್ಕೆ ಇಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ. “ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ನೀಡಲಾಗುತ್ತಿದೆ. ಹಾಗೆಂದರೆ, ಕರ್ನಾಟಕಕ್ಕೂ ನೀಡಬೇಕು. ಇಲ್ಲದಿದ್ದರೆ ಯಾವುದೇ ರಾಜ್ಯಕ್ಕೂ ನೀಡಬಾರದು” ಎಂಬುದು ಸಿದ್ದರಾಮಯ್ಯ ಅವರ ನಿಲುವು. ಇದು ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಸ್ಪಷ್ಟವಿರುವ ಹೋರಾಟದ ಭಾಗ.
ಮುಖ್ಯಮಂತ್ರಿಯವರು ಬೆಂಗಳೂರನ್ನು ಜಾಗತಿಕ ಮಟ್ಟದ ನಗರವನ್ನಾಗಿ ರೂಪಿಸಲು ₹1.15 ಲಕ್ಷ ಕೋಟಿ ಬಂಡವಾಳ ಬೇಕಾಗಿದ್ದು, ಇದಕ್ಕಾಗಿ ವಿಶೇಷ ಅನುದಾನವನ್ನು ನೀಡಬೇಕೆಂದು ಕೇಂದ್ರವನ್ನು ಮನವಿ ಮಾಡಿದರು. ಜೊತೆಗೆ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಪ್ರವಾಹಪ್ರವಣ ಪ್ರದೇಶಗಳಲ್ಲಿ ಸಹಜ ಆಫತ್ತು ನಿರ್ವಹಣೆಗಾಗಿ ವಿಶೇಷ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕದಂತೆ ಹಿಂದುಳಿದ ಭಾಗಗಳಿಗೆ ಕೂಡ ಸಹಕಾರ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಎಲ್ಲಾ ಮನವಿಗೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದು, “ರಾಜ್ಯ ಸರ್ಕಾರ ಆರೋಪ ಮಾಡಿಲ್ಲ, ಕೇವಲ ಅನುದಾನ ಬೇಡಿಕೆಯನ್ನಷ್ಟೆ ಮನವರಿಕೆ ಮಾಡಿದೆ. ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಪರಿಶೀಲಿಸಲಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.