ಮಂಡ್ಯ: ಹಳೆ ಮೈಸೂರು ಭಾಗದ ಕೃಷಿಯ ಜೀವನಾಡಿಯಾಗಿ ಗುರುತಿಸಲ್ಪಡುವ ಕಾವೇರಿ ನದಿಯ ಮೇಲೆ ನಿರ್ಮಿತವಾಗಿರುವ ಪ್ರಸಿದ್ಧ ಕೆಆರ್ಎಸ್ ಡ್ಯಾಂ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಸಂಪೂರ್ಣ ಭರ್ತಿಯಾಗಿದೆ. ಈ ಮೂಲಕ ಡ್ಯಾಂ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಈ ಡ್ಯಾಂ ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುವುದು ಸಾಮಾನ್ಯ. ಆದರೆ ಈ ವರ್ಷ ಮಳೆಗಾಲದ ಆರಂಭದಲ್ಲೇ ಜೂನ್ ತಿಂಗಳಲ್ಲಿ ಭರ್ತಿ ಆಗಿರುವುದು ಅಪರೂಪದ ಸಂಗತಿ. ಈ ಸಾಂದರ್ಭಿಕ ಕ್ಷಣವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐತಿಹಾಸಿಕ ಹೆಗ್ಗಳಿಕೆಯನ್ನು ತರಲಿದೆ. ಜೂನ್ನಲ್ಲೇ ಬಾಗಿನ ಅರ್ಪಿಸುವ ಅವಕಾಶ ಈವರೆಗೆ ಯಾವ ಮುಖ್ಯಮಂತ್ರಿಗೂ ದೊರೆತಿಲ್ಲ.
1979 ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿದೆ. ಮೊದಲ ಬಾರಿಗೆ ಡಿ. ದೇವರಾಜ ಅರಸ್ ಬಾಗಿನ ಅರ್ಪಿಸುವ ಮೂಲಕ ಆ ಪದ್ದಗೆ ನಾಂದಿ ಹಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ಮುಖ್ಯಮಂತ್ರಿಗೂ ಜೂನ್ನಲ್ಲಿ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿಲ್ಲ.
ಈ ವರ್ಷ ಅವಧಿಪೂರ್ವ ಮುಂಗಾರು ಮಳೆಯ ಕಾರಣ, ಜೂನ್ ಆರಂಭದಲ್ಲೇ ಡ್ಯಾಂ ನೀರಿನ ಮಟ್ಟ 100 ಅಡಿ ದಾಟುವ ಮೂಲಕ ದಾಖಲೆ ಬರೆದಿತ್ತು. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದ ನೀರಿನ ಮಟ್ಟ ಮೇ ಕೊನೆಯ ವಾರದಲ್ಲೇ 98 ಅಡಿ ತಲುಪಿತ್ತು. ಆ ಸಂದರ್ಭದಲ್ಲೇ ಕೆಆರ್ಎಸ್ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇತ್ತು. ಹಾಗಾಗಿ ಡ್ಯಾಂನಿಂದ 630 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು.