ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ ಜೀವನ ಮತ್ತು ಸಾಧನೆ ದೇಶಕ್ಕೆ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಪುರಸಭೆಯ ಆವರಣದಲ್ಲಿ ನಡೆದ ಡಾ.ಬಾಬು ಜಗಜೀವನ್ ರಾಂ ಅವರ ೩೯ ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದೂರದೃಷ್ಠಿಯ ಆಡಳಿತ ನಡೆಸಿ ಭಾರತ ದೇಶ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಗಳಿಸಲು ಶಾಶ್ವತ ಯೋಜನೆ ರೂಪಿಸಿದ ಅವರು ಅಜರಾಮರ ಎಂದರು.
ಕೃಷಿ ಜತೆಗೆ ಕೈಗಾರಿಕಾ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡು ಕಾರ್ಮಿಕರ ಕೆಲಸದ ಅವಧಿಯಲ್ಲಿಯೂ ಅಮೂಲಾಗ್ರ ಬದಲಾವಣೆ ತಂದು ಹೊಸ ನಿಯಮಗಳನ್ನು ಜಾರಿಗೊಳಿಸಿದ ಅವರು ಅಧಿಕಾರ ನಡೆಸುವವರಿಗೆ ದಾರಿ ದೀಪವಾಗಿದ್ದು ಅಂತಹ ಅದ್ಬುತ ಆಡಳಿತಗಾರ ದೇಶದ ಸಂಪತ್ತು ಎಂದು ಬಣ್ಣಿಸಿದರು.
ಭಗವಾನ್ ಬುದ್ದ, ಜಗಜ್ಯೋತಿ ಬಸವೇಶ್ವರ ಮತ್ತು ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಡಾ.ಬಾಬು ಜಗಜೀವನ್ ರಾಂ ಅವರು ಸಹ ದೇಶದ ಏಳಿಗೆಗೆ ಅಪಾರವಾದ ಕೊಡುಗೆ ನೀಡಿದ್ದು ಅವರನ್ನು ಸರ್ವರೂ ಗೌರವಿಸಿ ಪೂಜಿಸಬೇಕೆಂದರು.
ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಾಬು ಜಗಜೀವನ್ ರಾಂ ಅವರ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ೧ ಕೋಟಿ ಅನುದಾನ ಕೊಡಿಸುವುದರ ಜತೆಗೆ ನನ್ನ ಶಾಸಕತ್ವದ ಅವದಿಯಲ್ಲಿ ಅದನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುತ್ತದೆಂದು ಭರವಸೆ ನೀಡಿದ ಅವರು ಅಂಬೇಡ್ಕರ್ ಸಮುದಾಯ ಭವನಕ್ಕೂ ಈ ಹಿಂದೆ ೨ ಕೋಟಿ ನೀಡಲಾಗಿತ್ತು ಈಗ ೨ ಕೋಟಿ ಬಿಡುಗಡೆ ಮಾಡಿಸಿದ್ದು ಮುಂದೆಯು ೨.೫ ಕೋಟಿ ಅನುದಾನ ಕೊಡಿಸುತ್ತೇನೆಂದು ಭರವಸೆ ನೀಡಿದರು.
ಶಾಸಕನಾಗಿ ಆಯ್ಕೆಯಾದ ನಂತರ ನಾನು ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದು ಮತದಾರರು ನನಗೆ ನೀಡಿರುವ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳುತ್ತೇನೆಂದು ನುಡಿದರು. ಇದಕ್ಕೂ ಮೊದಲು ಶಾಸಕರು ಡಾ.ಬಾಬು ಜಗಜೀವನ್ ರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಅಧಿಕಾರಿಗಳ ವಿರುದ್ದ ಗರಂ
ಡಾ.ಬಾಬು ಜಗಜೀವನ್ ರಾಂ ಅವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ತಹಸೀಲ್ದಾರರಾದ ಜಿ.ಸುರೇಂದ್ರಮೂರ್ತಿ, ಎನ್.ಎಸ್.ನರಗುಂದ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಪಿಎಸ್ಐ ಸ್ವಾಮಿಗೌಡ ಮತ್ತು ತಾಲೂಕು ಹಿರಿಯ ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ಅವರನ್ನು ಹೊರತುಪಡಿಸಿ ಇತರ ತಾಲೂಕು ಮಟ್ಟದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಶಾಸಕ ಡಿ.ರವಿಶಂಕರ್ ಗರಂ ಆದರು.
ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳಿಗೆ ನಾಳೆಯೆ ನೋಟಿಸ್ ನೀಡಿ ಜತೆಗೆ ಈ ಸಂಬoದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಆನಂತರ ನಾನು ಅವರ ವಿರುದ್ದ ಕಠಿಣ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಉಪಾಧ್ಯಕ್ಷೆ ಪಲ್ಲವಿಆನಂದ್, ಸದಸ್ಯರಾದ ಸಿ.ಶಂಕರ್, ಸರೋಜಾಮಹದೇವ್, ಶಂಕರ್ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಕಂಠಿಕುಮಾರ್, ತಾಲೂಕು ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಬ್ಯಾಡರಹಳ್ಳಿಕುಮಾರ್, ತಾಲೂಕು ಆದಿ ಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಮುಖಂಡರಾದ ತಿಮ್ಮಶೆಟ್ಟಿ, ರಾಮಾಚಾರಿ ಮತ್ತಿತರು ಇದ್ದರು.