ಹಾಸನ : ಜಿಲ್ಲೆಯ ಪ್ರಸಿದ್ಧ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ಇಂದು ದೇವಾಲಯದ ಬಾಗಿಲು ಇಂದು ತೆರೆಯಲಾಗುತ್ತದೆ.
ಇಂದಿನಿಂದ ಅ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದ್ದು, ಅ. 10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಾಸನಾಂಬೆಯ ಉತ್ಸವಕ್ಕೆ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ 12 ದಿನಗಳವರೆಗೆ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಅಂದಾಜು 20 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ವರ್ಷಕ್ಕೊಮ್ಮೆ ಸಿಗುವ ಹಾಸನಾಂಬೆ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತಗಣ ಕಾದು ಕುಳಿತಿದೆ.
ವಸ್ತ್ರ ಸಂಹಿತೆ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರಂತೆ ಹಾಸನ ಜಿಲ್ಲೆ ಹಾಸನ ಟೌನ್ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಪುರುಷರು ಪಂಚೆ, ದೋತಿಯಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರದಂತಹ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದು. ಯಾವುದೇ ರೀತಿಯ ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ, ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ಆದೇಶಿಸಲಾಗಿದೆ.
24 ಗಂಟೆ ದೇವಸ್ಥಾನದ ಬಾಗಿಲು ತೆರೆದಿರುತ್ತೆ
ಈ ಬಾರಿ ಭಕ್ತರಿಗೆ ಗುಡ್ನ್ಯೂಸ್ ಸಿಕ್ಕಿದ್ದು, ದಿನದ 24 ಗಂಟೆಗಾಲ ಕಾಲ ದೇವಸ್ಥಾನ ಬಾಗಿಲು ಓಪನ್ ಇರುತ್ತದೆ. ಆದರೆ ಪೂಜೆಯ ಕೆಲಸಗಳನ್ನ ಮಾಡುವ ಸಮಯದಲ್ಲಿ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಉಳಿದ ಸಮಯದಲ್ಲಿ ಅವಕಾಶ ನೀಡಲಾಗುತ್ತದೆ. ಅಲ್ಲದೇ, ಹಿಂದಿನ ವರ್ಷ ಈ ಉತ್ಸವಕ್ಕೆ 6.80 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿತ್ತು. ಆದರೆ ಈ ವರ್ಷ ಇನ್ನೂ ಜಾಸ್ತಿ ಆಗಬಹುದು ಎಂದಿದ್ದಾರೆ.
ವಿಐಪಿ ದರ್ಶನಕ್ಕೆ ರೂಲ್ಸ್
ವಿಐಪಿಗಳು ದರ್ಶನಕ್ಕೆ ಬಂದರೆ ಇದರಿಂದ ಜನ ಸಾಮಾನ್ಯರಿಗೆ ಬಹಳ ತೊಂದರೆ ಆಗುತ್ತಿತ್ತು. ಅದರಲ್ಲೂ ಅವರ ಜೊತೆ ಇನ್ನೂ 10 ರಿಂದ 15 ಜನ ಬರುವುದರಿಂದ ಬಹಳಷ್ಟು ಹೊತ್ತು ಜನ ಜ್ಯೂನಲ್ಲಿ ಕಾಯಬೇಕಿತ್ತು. ಹಾಗಾಗಿ ಈ ಬಾರಿ ವಿಐಪಿಗಳ ದರ್ಶನಕ್ಕೆ ಸಹ ನಿಯಮಗಳನ್ನ ಜಾರಿ ಮಾಡಲಾಗಿದೆ.
ಈ ಬಾರಿ ಗಣ್ಯರ ಜೊತೆ ಕೇವಲ 4 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಇಡೀ ದಿನ ಅವಕಾಶ ನೀಡುವುದಿಲ್ಲ. ಕೇವಲ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇವುಗಳನ್ನ ನಿರ್ವಹಣೆ ಮಾಡಲು ಹಾಸನ ಎಡಿಸಿ ನಿಯೋಜನೆ ಮಾಡಲಾಗಿದೆ.
ಆದರೆ ವಿಐಪಿ ಪಾಸ್ ಇರುವವರಿಗೆ ಪ್ರತಿದಿನ ಬೆಳಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆವರೆಗೆ ಸಹ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ, ಬೆಳಿಗ್ಗೆ 7:30 ರಿಂದ ಬೆಳಿಗ್ಗೆ 10:30 ರವರೆಗೂ ಗೋಲ್ಡ್ ಪಾಸ್ ಇದ್ದವರಿಗೆ ಅವಕಾಶ ನೀಡಲಾಗುತ್ತದೆ.
ಅಕ್ಟೋಬರ್ 21 ಮತ್ತು 22ರಂದು ಈ ರೀತಿ ವಿಐಪಿ ಪ್ರೋಟ್ ಕಾಲ್ ದರ್ಶನ ಇರುವುದಲ್ಲ. ಬರೀ ಸಾರ್ವಜನಿಕರಿಗೆ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಅದರ ಜೊತೆಗೆ ಒಂದು ದಿನಕ್ಕೆ ಒಂದು ಸಾವಿರ ಮಂದಿಗೆ ಮಾತ್ರ ಪಾಸ್ಗಳನ್ನ ಕೊಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನು ವಿಶೇಷ ದರ್ಶನಕ್ಕೆ 300 ರೂ. 1000 ರೂ. ಪಾಸ್ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಲಾಗಿದೆ. ಅಲ್ಲದೇ ಗೋಲ್ಡ್ ಪಾಸ್ ಜಾರಿಗೆ ತರಲಾಗಿದ್ದು, ಇದರಲ್ಲಿ ಒಂದು ಪಾಸ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.