ಚಾಮರಾಜನಗರ: ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ವಿಧವಾ ವೇತನ, ವೃದ್ಯಾಪ್ಯ, ವಿಕಲಚೇತನರಿಗೆ ಪಿಂಚಣಿಯನ್ನು ಸರ್ಕಾರ ಹೆಚ್ಚಿಸುವಂತೆ ಮಹಿಳೋದಯ ಮಹಿಳಾ ಒಕ್ಕೂಟ ಹಾಗೂ ಓ.ಡಿ.ಪಿ ಸಂಸ್ಥೆ ಚಾಮರಾಜನಗರ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಒಕ್ಕೂಟದ ಸದಸ್ಯರು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಓ.ಡಿ.ಪಿ ಸಂಸ್ಥೆಯ ವಲಯ ಸಂಯೋಜಕ ಸಿದ್ದರಾಜು ಮಾತನಾಡಿ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಶೋಷಣೆ ಹಾಗೂ ಲೈಂಗಿಕ ಕಿರುಕುಳಗಳು ಹೆಚ್ಚಾಗಿ ನಡೆಯುತ್ತಿದೆ ಇದನ್ನು ನಮ್ಮ ಸಂಸ್ಥೆಯು ಖಂಡಿಸುತ್ತದೆ. ರಕ್ಷಣಾ ಇಲಾಖೆ ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಕಾನೂನಿನಲ್ಲಿ ಭದ್ರತೆ ಒದಗಿಸಬೇಕು. ಹಾಗೂ ವಿಧವೆ ವೇತನ, ವೃದ್ಯಾಪ್ಯ, ವಿಕಲಚೇತನರಿಗೆ ಪಿಂಚಣಿಯನ್ನು ಸರ್ಕಾರ ಪ್ರತಿಯೊಬ್ಬ ಪಿಂಚಣಿದಾರರಿಗೆ ತಿಂಗಳಿಗೆ ೩೦೦೦ ನೀಡುವಂತೆ ಒತ್ತಾಯಿಸಿದರು.
ಬೇಡಿಕೆಗಳೇನು?
- ಅತ್ಯಾಚಾರ ಮತ್ತು ಕೊಲೆವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಮರಣ ದಂಡನೆ ವಿಧಿಸಬೇಕು.
- ಮಹಿಳೆಯರ ಮೇಲಿನ ಹೀನಕೃತ್ಯ ನಡೆಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
- ಮಹಿಳೆಯ ವಿರುದ್ದ ನಡೆಯುವ ಅಪರಾಧಗಳನ್ನು ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ವಹಿಸಬೇಕು.
- ಕೋರ್ಟ್ಗಳಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.
ಪ್ರತಿಭಟನೆಯಲ್ಲಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಎಸ್ತರ್ರೋಜ್, ಕಾರ್ಯಕರ್ತರಾದ ಸರೋಜ, ಬಸಮ್ಮ, ರೇಖಮಣಿ, ಮರಿಜೋಸೆಫ್, ಮಹೇಶ್, ರಾಮಕೃಷ್ಣ, ರವಿ, ಪರಮೇಶ್ವರಿ, ಸಾಕಮ್ಮ, ಸುಮತಿ, ಸುಮಿತ್ರ, ಅಭಿಲಾಷ, ಹಾಗೂ ಗ್ರಾಮೀಣಭಾಗದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.



