ಮಂಡ್ಯ : ಜಿಲ್ಲೆಯಲ್ಲಿ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 167 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಇಲ್ಲಿಯವರೆಗೆ 142 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 7 ಮನೆಗಳ ಕಾಮಗಾರಿ ಪ್ರಾರಂಭವಾಗಿದೆ, 2 ಮನೆಗಳಿಗೆ ಫೌಂಡೇಶನ್ ಹಾಕಲಾಗಿದೆ, 5 ಲೆನ್ಟಲ್ ಹಾಗೂ 3 ರೂಫ್ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ವ್ಯಾಪ್ತಿಯಲ್ಲಿ ಕೆ.ಎಂ.ಎಫ್ ಮಳಿಗೆಗಳನ್ನು ತೆರೆಯಲು ಸೂಕ್ತ ಜಾಗ ಗುರುತಿಸಿ, ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಿ, ಮಾನ್ಯ ಹೈಕೋರ್ಟ್ ನಿರ್ದೇಶನದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ನಾಯಿಗಳಿಗೆ ಲಸಿಕೆ ನೀಡಲು ನಗರ ಸಭೆಗೆ 60 ಲಕ್ಷ ಹಾಗೂ ಪುರಸಭೆಗಳಿಗೆ 10 ಲಕ್ಷ ನೀಡಲಾಗಿದೆ ಶ್ರೀಘ್ರವಾಗಿ ಬೀದಿ ನಾಯಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ವಹಿಸಿ ಎಂದು ಹೇಳಿದರು.
ಕಾಲಕಾಲಕ್ಕೆ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಬೇಕು, ಕಳೆದ ಬಾರಿಗೆ ಹೋಲಿಸಿದರೆ ಸದರಿ ಮಾಹೆಯ ಆಸ್ತಿ ತೆರಿಗೆ ವಸುಲಾತಿಯನ್ನು ಶೇ5.85 ರಷ್ಟು ಹೆಚ್ಚಿಸಲಾಗಿದೆ, ಒಟ್ಟಾರೆ ಶೇ 80.43 ರಷ್ಟು ಆಸ್ತಿ ತೆರಿಗೆ ವಸೂಲಾತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರದ ಗುಣಮಟ್ಟವನ್ನು ಕಾಪಾಡಬೇಕು, ಅಧಿಕಾರಿಗಳು ಕಾಲ ಕಾಲಕ್ಕೆ ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಇ-ಖಾತಾ ಅಭಿಯಾನ ಮಾರ್ಚ್ 2025 ರವರೆಗೂ ಎ ಮತ್ತು ಬಿ ಖಾತಾ ಸೇರಿ ಒಟ್ಟು 47914 ಖಾತೆಗಳನ್ನು ನೀಡಲಾಗಿದೆ, ಮಾರ್ಚ್ 2025 ರಿಂದ ಇಲ್ಲಿಯವರೆಗೆ ಎ ಮತ್ತು ಬಿ ಖಾತಾ ಸೇರಿ ಒಟ್ಟು 11875 ಖಾತೆಗಳನ್ನು ನೀಡಲಾಗಿದೆ, ಇನ್ನೂ 26514 ಖಾತೆಗಳು ಬಾಕಿ ಉಳಿದಿದೆ ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಪ್ರಥಾಪ್, ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೆರೆ, ನಗರಸಭೆ ಪೌರಾಯುಕ್ತೆ ಪಂಪಶ್ರೀ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



