ಹೊಸದಿಲ್ಲಿ: ಭಾರತ ಸರ್ಕಾರವು ದೇಶದ ಅತಿ ಕಡಿಮೆ ನಿಯಂತ್ರಿತ ವಲಯಗಳಲ್ಲಿ ಒಂದಾಗಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮವನ್ನು ನಿಯಂತ್ರಿಸಲು ಕಠಿಣವಾದ ಹೊಸ ಕಾನೂನನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದು, ‘ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ, 2025’ ಎಂಬ ಹೆಸರಿನ ಮಸೂದೆಯನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಕೇವಲ ತೆರಿಗೆಯಲ್ಲ, ಬದಲಿಗೆ ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್ ವಿಧಿಸುವ ಮೂಲಕ ಹೊಸ ಆದಾಯ ಸೃಷ್ಟಿಸಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬಳಸುವ ಮಹತ್ವದ ಹೆಜ್ಜೆಯಾಗಿದೆ. ಈ ಹೊಸ ಮಸೂದೆಯು ಕೇವಲ ಉತ್ಪಾದನೆಯ ಮೇಲೆ ತೆರಿಗೆ ವಿಧಿಸುವ ಹಳೆಯ ಪದ್ಧತಿಯನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು.
ಇದೀಗ ಕಾರ್ಖಾನೆಗಳು ಎಷ್ಟು ಉತ್ಪಾದಿಸುತ್ತವೆ ಎಂಬುದರ ಆಧಾರದ ಮೇಲೆ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಯಂತ್ರಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ವಿಶೇಷ ಸೆಸ್ ವಿಧಿಸಲಾಗುತ್ತದೆ. ಕೈಯಿಂದ ತಯಾರಿಸುವ ಉತ್ಪನ್ನಗಳಿಗೂ, ಪ್ರತಿ ತಿಂಗಳು ನಿಗದಿತ ಸೆಸ್ ಪಾವತಿಸುವುದು ಕಡ್ಡಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ತಂಬಾಕು ಉತ್ಪನ್ನಗಳ ಸೇವನೆಯ ಪ್ರಮಾಣ ಮತ್ತು ಅಕ್ರಮ ವ್ಯಾಪಾರದಿಂದಾಗಿ ನೇರವಾಗಿ ಪರಿಣಾಮ ಬೀರುವ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಹೊಸ ಆದಾಯವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.
ಅದಲ್ಲದೇ ಹೊಸ ನಿಯಮಗಳ ಅಡಿಯಲ್ಲಿ, ತಯಾರಕರು ತಮ್ಮ ಉತ್ಪಾದನೆಯಲ್ಲಿ ಏನೇ ಏರಿಳಿತಗಳಿದ್ದರೂ ಪ್ರತಿ ತಿಂಗಳು ಸೆಸ್ ಅನ್ನು ಠೇವಣಿ ಮಾಡಬೇಕಾಗುತ್ತದೆ. ಯಂತ್ರ ಅಥವಾ ಉತ್ಪಾದನಾ ಪ್ರಕ್ರಿಯೆಯು 15 ದಿನಗಳಿಗಿಂತ ಹೆಚ್ಚು ಕಾಲ ಸ್ಥಗಿತಗೊಂಡರೆ ಮಾತ್ರ ವಿನಾಯಿತಿ ಸಿಗುವ ಸಾಧ್ಯತೆಯಿದ್ದು, ಈ ನಿಬಂಧನೆಯು ಉದ್ಯಮದವರಲ್ಲಿ ತೀವ್ರ ಚರ್ಚೆಗೆ ಕಾರಣವಾಗಬಹುದು. ಪ್ರತಿ ತಯಾರಕರು, ದೊಡ್ಡವರಾಗಿರಲಿ ಅಥವಾ ಸಣ್ಣವರಾಗಿರಲಿ, ಸರ್ಕಾರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ತಿಂಗಳು ವರದಿಗಳನ್ನು ಸಲ್ಲಿಸಬೇಕು ಮತ್ತು ಅಧಿಕೃತ ಅಧಿಕಾರಿಗಳು ಪರಿಶೀಲನೆ, ತನಿಖೆ ಮತ್ತು ಲೆಕ್ಕಪರಿಶೋಧನೆಗೆ ತಮ್ಮ ಘಟಕಗಳನ್ನು ತೆರೆದಿಡಬೇಕು ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ ಪ್ರಕಾರ, ಈ ಪರಿಶೀಲನೆಗಳು ದೀರ್ಘಕಾಲದಿಂದ ಪಾರದರ್ಶಕತೆಯ ಕೊರತೆ ಮತ್ತು ವ್ಯಾಪಕ ತೆರಿಗೆ ವಂಚನೆಗಾಗಿ ಟೀಕೆಗೆ ಗುರಿಯಾಗಿರುವ ಈ ವಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಈ ಮಸೂದೆಯು ಉಲ್ಲಂಘನೆಗಳಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ. ಆದರೂ, ಕಂಪನಿಗಳು ಮೇಲ್ಮನವಿ ಪ್ರಾಧಿಕಾರಗಳಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಆದೇಶಗಳನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದು, ಇದು ವಿವಾದಗಳಿಗಾಗಿ ಕಾನೂನು ಮಾರ್ಗವನ್ನು ಖಚಿತಪಡಿಸುತ್ತದೆ. ಪ್ರಮುಖವಾಗಿ, ಪರಿಸ್ಥಿತಿಗಳು ಬೇಡಿಕೆಯೊಡ್ಡಿದರೆ, ಕೇಂದ್ರ ಸರ್ಕಾರವು ಸೆಸ್ ಅನ್ನು ದ್ವಿಗುಣಗೊಳಿಸುವ ಅಧಿಕಾರವನ್ನು ಕಾಯ್ದಿರಿಸಿಕೊಳ್ಳುತ್ತದೆ. ಇದು ಉದ್ಯಮದ ಆರ್ಥಿಕತೆಯ ಮೇಲೆ ಕೇಂದ್ರಕ್ಕೆ ಪ್ರಬಲ ನಿಯಂತ್ರಣ ನೀಡುತ್ತದೆ ಎಂದಿದ್ದಾರೆ.
ಈ ಕಾನೂನು ಅಂಗೀಕಾರವಾದರೆ, ಭಾರತದ ತಂಬಾಕು ಸಂಬಂಧಿತ ಉತ್ಪನ್ನಗಳ ಉದ್ಯಮದ ಇತಿಹಾಸದಲ್ಲಿ ಇದು ಅತ್ಯಂತ ವ್ಯಾಪಕವಾದ ನಿಯಂತ್ರಣ ಸುಧಾರಣೆಗಳಲ್ಲಿ ಒಂದಾಗುತ್ತದೆ ಎಂದು ತಿಳಿಸಿದ್ದಾರೆ.



