ಬೆಂಗಳೂರು: ಉತ್ತಮ ತರಬೇತಿ, ತರಬೇತುದಾರು ಹಾಗೂ ಸೌಲಭ್ಯಗಳಿದ್ದರೆ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಷ್ಟವೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2022 ಮತ್ತು 2023ರ ಏಕಲವ್ಯ ಜೀವಮಾನ ಸಾಧನೆ ಕರ್ನಾಟಕ ಕ್ರೀಡಾರತ್ನ ಹಾಗೂ 2023ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರಧನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಪಟುಗಳು ತಮ್ಮ ಗುರಿಸಾಧನೆಗೆ ಶ್ರಮಿಸಬೇಕೆಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದ ಮುಖ್ಯಮಂತ್ರಿಗಳು, ಏಳು ಕೋಟಿ ಕನ್ನಡಿಗರಿರುವ ಕರ್ನಾಟಕದಿಂದ ಪದಕ ಗೆಲ್ಲುವುದು ಅಸಾಧ್ಯವೇನಲ್ಲ ಎಂದರು.
ಒಲಂಪಿಕ್ಸ್ ಪದಕವಿಜೇತ ಕ್ರೀಡಾಪಟುಗಳಿಗೆ ಪ್ರೋತ್ಸಾಹ
ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಲಂಪಿಕ್ಸ್ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ, ಶ್ರೇಣಿ1 ಅಥವಾ 2 ರಲ್ಲಿ ಸರ್ಕಾರಿ ಉದ್ಯೋಗ , ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ , ಕಂಚು ಪದಕ ವಿಜೇತರಿಗೆ 3 ಕೋಟಿ ರೂ.ನಗದು ಬಹುಮಾನ ನೀಡಲಾಗುತ್ತಿದೆ ಎಂದರು.
ಏಕಲವ್ಯ ಪ್ರಶಸ್ತಿ ನಗದು ಬಹುಮಾನದ ಮೊತ್ತದಲ್ಲಿ ಹೆಚ್ಚಳ
ಎರಡು ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಒಟ್ಟು 30 ಜನರಿಗೆ ನೀಡಲಾಗಿದ್ದು,4 ಲಕ್ಷಗಳ ನಗದು ಬಹುಮಾನವನ್ನು ಪ್ರಶಸ್ತಿ ಒಳಗೊಂಡಿದೆ. ನಗದು ಬಹುಮಾನದ ಮೊತ್ತವನ್ನು ನನ್ನ ಅವಧಿಯಲ್ಲಿಯೇ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ನೀಡುವ ತರಬೇತುದಾರರಿಗೆ ಒಟ್ಟು 9 ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ. ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕರನ್ನು ಗುರುತಿಸಿ ಒಟ್ಟು 15 ಕ್ರೀಡಾರತ್ನ ಪ್ರಶಸ್ತಿಗಳನ್ನು ನೀಡಲಾಗಿದ್ದು, 2 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಖಾಸಗಿ ಕ್ಷೇತ್ರದ ಸಂಸ್ಥಗಳನ್ನು ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.
ಕರ್ನಾಟಕದ ಕ್ರೀಡಾಪಟುಗಳಿಗೆ ಗೆಲ್ಲುವ ಸಾಧ್ಯತೆಗಳಿವೆ, ಪ್ರಯತ್ನ ಮಾಡಬೇಕಷ್ಟೇ ಎಂದು ಪ್ರೋತ್ಸಾಹ ನೀಡಿದ ಮುಖ್ಯಮಂತ್ರಿಗಳು 2028 ರಲ್ಲಿ ಲಾಸ್ ಆಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದ್ದು, ಪ್ರತಿ ವರ್ಷ 10 ಲಕ್ಷ ರೂ. ಗಳನ್ನು ತರಬೇತಿಯ ಅವಧಿಯಲ್ಲಿಯೇ ನೀಡಲಾಗುತ್ತಿದೆ ಎಂದರು.
ಗುರಿ ಸಾಧಿಸಿ
ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿಯೇ ಸಂಪೂರ್ಣ ಏಕಾಗ್ರತೆ, ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
ಅಥ್ಲೆಟಿಕ್ಸ್ ನಲ್ಲಿಯೂ ಸಾಧನೆ ಮಾಡಿ: ಸಿಎಂ ಕರೆ
ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ ಎಂದರು. ಒಲಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಕರ್ನಾಟಕ ಉತ್ತಮ ಕ್ರೀಡಾಪಟುಗಳನ್ನು ಈವರೆಗೆ ರೂಪಿಸಿದೆ. ಹಾಕಿಯಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅಥ್ಲೆಟಿಕ್ಸ್ ನಲ್ಲಿಯೂ ಸಾಧನೆ ಮಾಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಾತಿ ವ್ಯವಸ್ಥೆಯ ಕಾರಣದಿಂದ ಹೆಬ್ಬೆರಳು ಕಳೆದುಕೊಂಡ ಏಕಲವ್ಯ
ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು. ಅರ್ಜುನನಿಗಿಂತ ಮೀರಿ ಬಿಲ್ಲುವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಪಡೆಯುತ್ತಾರೆ. ಆ ಕಾಲದಲ್ಲಿಯೂ ಜಾತಿ ವ್ಯವಸ್ಥೆಯಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಏಕಲವ್ಯ ಪ್ರಶಸ್ತಿ ಪಡೆದವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರಿಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಭಿನಂದಿಸಿದರು



