ಚಾಮರಾಜನಗರ: ಸಂಪುಟ ಪುನಾರಚನೆ ಆದರೆ ಮುನಿಯಪ್ಪ, ಮಹದೇವಪ್ಪ, ಪರಮೇಶ್ವರ್ ಎಲ್ಲರಿಗೂ ಕೂಡ ಕೊಕ್ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಎಂ, ಡಿಸಿಎಂ 2ನೇ ಬ್ರೇಕ್ ಫಾಸ್ಟ್ ವಿಚಾರದ ಬಗ್ಗೆ ಕೊಳ್ಳೇಗಾಲದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಕೆಶಿ ಯಾವತ್ತೂ ಕೂಡ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿದ್ದವರಲ್ಲ. ಸಿದ್ದರಾಮಯ್ಯ ಕೂಡ ಯಾವತ್ತೂ ಡಿಕೆಶಿಗೆ ಮನೆಗೆ ಹೋಗಿಲ್ಲ. ಅಧಿಕಾರದ ಆಸೆಯಿಂದ ಸಿಎಂ ಉಳಿಸಿಕೊಳ್ಳಬೇಕು ಅಂತಾ ಅವರ ಮನೆಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಬ್ರೇಕ್ ಫಾಸ್ಟ್ ನೆಪಮಾತ್ರ. ಮನಸ್ಸುಗಳೇ ಬ್ರೇಕ್ ಆಗಿರುವಾಗ ಬ್ರೇಕ್ ಫಾಸ್ಟ್ ತೇಪೆ ಹಚ್ಚುತ್ತಾ ಹೇಳಿ? ರಾಜ್ಯದ ಅಭಿವೃದ್ಧಿ ಚಿಂತಿಸಲು ಸೇರಿದ್ರಾ, ದಲಿತರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಸಲು ಏನಾದ್ರೂ ಸೇರಿದ್ದಾರಾ? ಬ್ರೇಕ್ ಫಾಸ್ಟ್, ಪಾರ್ಟಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಹಿಂದೆ ಡಿಕೆಶಿ ತಾಯಿ ಮಾತನಾಡಿದ್ದ ವಿಡಿಯೋ ಬಗ್ಗೆ ಪ್ರಸ್ತಾಪಿಸಿದರು. ಡಿಕೆಶಿ ಒಂದು ಹೇಳಿಕೆ ಕೊಟ್ಟಿದ್ದಾರೆ, ನಾವಿಬ್ಬರೂ ಬ್ರದರ್ಸ್ ಅಂತಾ ಹೇಳಿದ್ದಾರೆ. ಕುಕ್ಕರ್ ಬ್ಲಾಸ್ಟ್ ಹಾಗೂ ಬೆಂಗಳೂರಿನಲ್ಲಿ ಬೇರೆ ಕೃತ್ಯ ಎಸಗಿದವರನ್ನು ಬ್ರದರ್ಸ್ ಅಂತಾ ಹೇಳಿದ್ದಾರೆ. ನನಗೆ ಗೊತ್ತಿರುವ ಹಾಗೆ ಅವರ ಬ್ರದರ್ ಡಿಕೆ ಸುರೇಶ್ ಅಷ್ಟೇ. ಕಾಂಗ್ರೆಸ್ನಲ್ಲಿ ದಲಿತರಿಗೆ ಕುರ್ಚಿ ಇಲ್ಲ ಅಂತಾ ಸಾಬೀತಾಗಿದೆ. ದಲಿತರ ಸಮಾಧಿಯನ್ನು ಕಾಂಗ್ರೆಸ್ ಪಾರ್ಟಿ ಸಂಪೂರ್ಣ ಕಟ್ಟಿ ಆಗಿದೆ. ಸಂಪುಟ ಪುನರ್ ರಚನೆಯಾದರೆ ಸಂಪುಟದಿಂದ ಪರಮೇಶ್ವರ್, ಮಹದೇವಪ್ಪ ಹಾಗೂ ಮುನಿಯಪ್ಪ ಮೂವರು ಕೂಡ ಔಟ್ ಆಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಇನ್ನೊಬ್ಬ ದಲಿತರನ್ನು ಸಿಎಂ ಆಗಲೂ ಬಿಡಲ್ಲ. ಸಿಎಂ ಆದ್ರೆ ಪ್ರಿಯಾಂಕ್ ಖರ್ಗೆಗೆ ಮಾತ್ರ ಅವಕಾಶ ಕೊಡುತ್ತಾರೆ ಎಂದು ಹರಿಹಾಯ್ದರು.
ಸಂಪುಟದಿಂದ ಪ್ರಿಯಾಂಕ್ ಖರ್ಗೆಯವರನ್ನು ಸಿಎಂ ಅಥವಾ ಡಿಸಿಎಂ ಮಾಡುತ್ತಾರೆ. ಎಐಸಿಸಿಯೇ ಹೈಕಮಾಂಡ್ ಆದ್ರೆ ನಾನು ಈ ಕುರ್ಚಿ ಕಿತ್ತಾಟ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅಂತಾರೆ. ಕಾಂಗ್ರೆಸ್ ಪಾರ್ಟಿಯಂತ ಕೆಟ್ಟ ಪಾರ್ಟಿ ಮತ್ತೊಂದು ಇಲ್ಲ. ಕಾಂಗ್ರೆಸ್ ಪಾರ್ಟಿ ಸರ್ವನಾಶ ಆದ್ರೆ ಅಷ್ಟೇ ಸಾರ್ವಜನಿಕರು ಉದ್ಧಾರ ಆಗುತ್ತಾರೆ ಎಂದರು.



