Saturday, December 20, 2025
Google search engine

Homeದೇಶಕಲಾಪದಲ್ಲಿ ವೈರತ್ವ, ಟೀ ಪಾರ್ಟಿಯಲ್ಲಿ ಮಿತ್ರತ್ವ

ಕಲಾಪದಲ್ಲಿ ವೈರತ್ವ, ಟೀ ಪಾರ್ಟಿಯಲ್ಲಿ ಮಿತ್ರತ್ವ

ಹೊಸದಿಲ್ಲಿ: ಭಾರತದ ಪ್ರಜಾಪ್ರಭುತ್ವದ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದೊಂದು ಸುದೀರ್ಘವಾದದ್ದು. ರಾಜಕೀಯ ಪಕ್ಷಗಳ ಸೈದ್ದಾಂತಿಕ ಸಂಘರ್ಷಗಳು, ಅಧಿವೇಶನಗಳಲ್ಲಿ ಪರಸ್ಪರ ವಾಕ್ಸಮರ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಅಸಹಕಾರ, ಕೆಲವೊಮ್ಮೆ ವ್ಯಕ್ತಿಗತ ದ್ವೇಷ ಇನ್ನೂ ಕೆಲವೊಮ್ಮೆ ಒಗ್ಗಟ್ಟಿನ ಪ್ರದರ್ಶನ. ಇದು ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ವಿಶಿಷ್ಟ ಲಕ್ಷಣ. ನೀನು ನಂಬುವ ಸಿದ್ಧಾಂತವನ್ನು ನಾನು ಒಪ್ಪಲು ಸಾಧ್ಯವಿಲ್ಲ, ಆದರೆ ಆ ಸಿದ್ಧಾಂತವನ್ನು ಪ್ರಚಾರ ಮಾಡುವ ನಿನ್ನ ಹಕ್ಕಿನ ರಕ್ಷಣೆಗಾಗಿ ನನ್ನ ರಕ್ತದ ಕೊನೆಯ ಹನಿವರೆಗೂ ಹೋರಾಡುವೆ ಎಂಬ ಯುರೋಪ್‌ನ ಖ್ಯಾತ ತತ್ವಜ್ಞಾನಿಯೊಬ್ಬರ ಹೇಳಿಕೆಯಂತೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಶ್ರೇಷ್ಠತೆಯನ್ನು ತಿಳಿಸಿಕೊಡುತ್ತದೆ.

ಡಿ.1ರಿಂದ ಆರಂಭಗೊಂಡಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನ 2025 ವಿದ್ಯುಕ್ತವಾಗಿ ತೆರೆಕಂಡಿದ್ದು, 19 ದಿನಗಳ ಕಾಲ ನಡೆದ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ತೀವ್ರ ವಾಕ್ಸಮರ, ಪರಸ್ಪರ ಆರೋಪ-ಪ್ರತ್ಯಾರೋಪ, ಕಲಾಪ ಬಹಿಷ್ಕಾರದಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ ಅಧಿವೇಶನ ಮುಕ್ತಾಯವಾಗುತ್ತಿದ್ದಂತೇ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ
ಪರಸ್ಪರ ಮಿತ್ರತ್ವ, ಪರಸ್ಪರ ಗೌರವ ಮತ್ತು ಆತ್ಮೀಯ ಚರ್ಚೆಗಳಿಗೂ ಸಾಕ್ಷಿಯಾಗಿದೆ.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಡಿ.19-ಶನಿವಾರ ತಮ್ಮ ಕಚೇರಿಯಲ್ಲಿ ಲೋಕಸಭಾ ಸದಸ್ಯರಿಗಾಗಿ ಚಹಾಕೂಟವನ್ನು ಏರ್ಪಡಿಸಿದ್ದರು. ಈ ಚಹಾಕೂಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಜರ್ಮನಿ ಪ್ರವಾಸದಲ್ಲಿರುವ ಕಾರಣ, ಪ್ರಿಯಾಂಕಾ ಗಾಂಧಿ ಅವರು ಈ ಚಹಾಕೂಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಪ್ರಿಯಾಂಕಾ ಗಾಂಧಿ ನಡುವೆ ಆತ್ಮೀಯ ಸಂವಾದ ನಡೆಯಿತು. ನಾಯಕರು ಚಹಾ ಸೇವಿಸುತ್ತಾ ಪರಸ್ಪರ ಆತ್ಮೀಯ ಕ್ಷಣಗಳನ್ನು ಕಳೆದರು.

ಲೋಕಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ಪ್ರಿಯಾಂಕಾ ಗಾಂಧಿ ನಡುವಿನ ಆತ್ಮೀಯ ಸಂವಾದ ಭಾರತದ ಪ್ರಜಾಪ್ರಭುತ್ವದ ಸೌಂದರ್ಯವನ್ನು ಬಣ್ಣಿಸುವಂತಿತ್ತು. ಅದೇ ರೀತಿ ಸ್ಪೀಕರ್‌ ಓಂ ಬಿರ್ಲಾ ಆಯೋಜಿಸಿದ್ದ ಸಾಂಪ್ರದಾಯಿಕ ಚಹಾಕೂಟ ಕೂಡ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ಸಾರುವಂತಿತ್ತು ಎನ್ನಲಾಗಿದೆ.

ಈ ಚಹಾಕೂಟ ಸುಮಾರು 20 ನಿಮಿಷಗಳ ಕಾಲ ನಡೆದಿದ್ದು, ಚಹಾಕೂಟದಲ್ಲಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಎನ್‌ಸಿಪಿ ಯ ಸುಪ್ರಿಯಾ ಸುಳೆ ಮತ್ತು ಸಿಪಿಐ ನಾಯಕಿ ಡಿ ರಾಜಾ ಕೂಡ ಉಪಸ್ಥಿತರಿದ್ದರು.

ಈ ವೇಳೆ ಅಧಿವೇಶನವನ್ನು ಇನ್ನೂ ಕೆಲವು ದಿನಗಳವರೆಗೆ ವಿಸ್ತರಿಸಬಹುದಿತ್ತು ಎಂಬ ಧರ್ಮೇಂದ್ರ ಯಾದವ್‌ ಅವರ ಸಲಹೆಗೆ, ಪ್ರಧಾನಿ ಮೋದಿ ಅವರು, ನನ್ನ ಗಂಟಲು ನೋಯದಂತೆ ಸ್ಪೀಕರ್‌ ಅವರು ಎಚ್ಚರವಹಿಸಿ ಅಧಿವೇಶನ ಮುಕ್ತಾಯಗೊಳಿಸಿದ್ದಾರೆ ಎಂದು ಹಾಸ್ಯಮಯವಾಗಿ ಹೇಳಿದರು. ಇದೇ ವೇಳೆ ಸದನಕ್ಕೆ ಸಂಪೂರ್ಣವಾಗಿ ಸಿದ್ಧರಾಗಿ ಬಂದಿದ್ದಕ್ಕಾಗಿ, ಎನ್‌ಕೆ ಪ್ರೇಮಚಂದ್ರನ್ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದು, ಕೆಲವು ವಿಪಕ್ಷ ನಾಯಕರು ಹೊಸ ಸಂಸತ್ ಕಟ್ಟಡದಲ್ಲಿ ಸಂಸದರಿಗಾಗಿ ಹಳೆಯ ಕಟ್ಟಡದ ಮಾದರಿಯಲ್ಲಿ ಕೇಂದ್ರ ಸಭಾಂಗಣವನ್ನು ನಿರ್ಮಾಣ ಮಾಡಬೇಕೆಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದರು. ಇದಕ್ಕೆ ಕೇಂದ್ರ ಸಭಾಂಗಣ ನಿವೃತ್ತ ಸಂಸದರಿಗಾಗಿ ಇದೆ. ನೀವೆಲ್ಲಾ ಇನ್ನೂ ಸೇವೆ ಸಲ್ಲಿಸಬೇಕು ಎಂಬುದು ನನ್ನ ಬಯಕೆ ಎಂದು ಪ್ರಧಾನಿ ತುಸು ವ್ಯಂಗ್ಯವಾಗಿ ಉತ್ತರಿಸಿದರು.

ಕಳೆದ ಬಾರಿಯ ಮಾನ್ಸೂನ್‌ ಸಂಸತ್ತಿನ ಅಧಿವೇಶನದ ಮುಕ್ತಾಯದ ಬಳಿಕ ಆಯೋಜಿಸಿದ್ದ ಚಹಾಕೂಟವನ್ನು ಪ್ರತಿಪಕ್ಷ ನಾಯಕರು ಬಹಿಷ್ಕರಿಸಿದ್ದರು. ಆ ಸಂದರ್ಭದಲ್ಲಿ ಸ್ಪೀಕರ್ ಅವರು ವಿರೋಧ ಪಕ್ಷದ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು. ಆದರೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸ್ಪೀಕರ್ ವಿರೋಧ ಪಕ್ಷದವರೊಂದಿಗೆ ನ್ಯಾಯಯುತವಾಗಿರುವುದರಿಂದ, ಎಲ್ಲಾ ವಿರೋಧ ಪಕ್ಷದ ಸಂಸದರು ಟೀ ಪಾರ್ಟಿಯಲ್ಲಿ ಭಾಗವಹಿಸಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಿರ್ದೇಶನ ನೀಡಿದ್ದರು ಎಂದು ಮೂಲಗಳು ಖಚಿತಪಡಿಸಿದವು.

ಒಟ್ಟಿನಲ್ಲಿ ಸ್ಪೀಕರ್‌ ಓಂ ಬಿರ್ಲಾ ಆಯೋಜಿಸಿದ್ದ ಚಹಾಕೂಟದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವಿನ ಆತ್ಮೀಯ ಸಂವಾದ ಭಾರತದ ಪ್ರಜಾಪ್ರಭುತ್ವ ಅತ್ಯಂತ ಗಟ್ಟಿಯಾಗಿದೆ ಎಂಬ ಸಂದೇಶ ರವಾನಿಸಿದೆ ಎಂದು ಹೇಳಬಹುದು.

RELATED ARTICLES
- Advertisment -
Google search engine

Most Popular