ಮಂಡ್ಯ : ಪಿಯುಸಿ ಮಕ್ಕಳಲ್ಲಿ ಪರೀಕ್ಷಾಭಯವನ್ನು ಹೋಗಲಾಡಿಸಲು ಮತ್ತು ಉತ್ತಮ ಫಲಿತಾಂಶಕ್ಕೆ ಅಣಿಗೊಳಿಸುವ ಸಂಬಂಧ ಸದರಿ ವರ್ಷದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ 2 ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ. ಚೆಲುವಯ್ಯ ತಿಳಿಸಿದರು.

ಮಂಡ್ಯ ನಗರದ ಕಾರ್ಮೆಲ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಂಶುಪಾಲರುಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಶುಕ್ರವಾರದಿಂದ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಪರೀಕ್ಷೆಯನ್ನು ಇಲಾಖೆಯ ನಿಯಮದ ಅನುಸಾರ ಕ್ರಮಬದ್ಧವಾಗಿ ಹಾಗೂ ಶಿಸ್ತು ಬದ್ಧವಾಗಿ ಕಾಲೇಜು ಹಂತದಲ್ಲಿ ನಡೆಸಲು ಎಲ್ಲಾ ಪ್ರಾಂಶುಪಾಲರು ಅಗತ್ಯ ಕ್ರಮವಹಿಸಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳ ಅಧ್ಯಯನ ಹಾಗೂ ಫಲಿತಾಂಶದ ದೃಷ್ಟಿಯಿಂದ ಪೂರ್ವಸಿದ್ಧತಾ ಪರೀಕ್ಷೆಗಳು ತುಂಬಾ ಅನುಕೂಲವಾಗಿದ್ದು ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಪೋಷಕರುಗಳು ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಮುಂದಿನ 60 ದಿನಗಳು ವಿದ್ಯಾರ್ಥಿಗಳ ಪರೀಕ್ಷಾ ಸಮಯವಾಗಿದ್ದು ಎಲ್ಲಾ ಉಪನ್ಯಾಸಕರಗಳು ವಿದ್ಯಾರ್ಥಿಗಳಲ್ಲಿರುವ ವಿಷಯವಾರು ಗೊಂದಲ ನಿವಾರಣೆಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕೆಂದ ಅವರು ಪೋಷಕರುಗಳು ಕೂಡ ಮನೆಯಲ್ಲಿ ತಮ್ಮ ಮಕ್ಕಳ ಅಧ್ಯಯನಕ್ಕೆ ಸೂಕ್ತವಾದಂತ ವಾತಾವರಣವನ್ನು ಒದಗಿಸುವುದರ ಜೊತೆಗೆ ಅವರ ಅಧ್ಯಯನ ಕಡೆಗೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.
ವಿಜ್ಞಾನ ವಿಷಯಗಳ ಪ್ರಾಯೋಗಿಕ ಪರೀಕ್ಷೆ
ಜನವರಿ ಮಾಸದ ಕೊನೆಯ ವಾರದಿಂದ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗುತ್ತಿದ್ದು ಜಿಲ್ಲೆಯಲ್ಲಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಅವರು ಇಲಾಖೆಯ ನಿಯಮದ ಅನುಸಾರ ಜಿಲ್ಲಾಧ್ಯಂತ ಒಟ್ಟು 28 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಮಳವಳ್ಳಿ 1, ಮಂಡ್ಯ 10, ಮದ್ದೂರು 3, ಶ್ರೀರಂಗಪಟ್ಟಣ 3 ಪಾಂಡುಪುರ 3, ಹಾಗೂ ನಾಗಮಂಗಲ 5 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಮೆಲ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೇರಿ ಅಶ್ವಿನಿ ಡಿಸೋಜ ಸದಾರಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಯು.ಎಸ್. ನಟರಾಜು, ಪ್ರಧಾನ ಕಾರ್ಯದರ್ಶಿ ಪಿ. ಕಾಂತರಾಜು, ಖಜಾಂಚಿ ಶಿವಕುಮಾರ್, ಉಪಾಧ್ಯಕ್ಷರುಗಳಾದ ಶಿವಲಿಂಗೇಗೌಡ, ಕಾವೇರಿ, ಸಹ ಕಾರ್ಯದರ್ಶಿ ಶ್ರೀನಿವಾಸು, ಸಂಚಾಲಕರಾದ ಲಿಂಗರಾಜು ಸೇರಿದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜಿನ ಪ್ರಾಂಶುಪಾಲರುಗಳು ಹಾಜರಿದ್ದರು.



