Tuesday, February 24, 2026
Google search engine

Homeಸ್ಥಳೀಯಆರ್‌ಆರ್ ನಗರ ಕಾಮಗಾರಿಗೆ ಡಿಕೆಶಿ ಭೇಟಿ ಮಾಡಿದ ಮುನಿರತ್ನ: ಕಾಮಗಾರಿ ಶೀಘ್ರ ಆರಂಭಕ್ಕೆ ಡಿಕೆಶಿ ಭರವಸೆ

ಆರ್‌ಆರ್ ನಗರ ಕಾಮಗಾರಿಗೆ ಡಿಕೆಶಿ ಭೇಟಿ ಮಾಡಿದ ಮುನಿರತ್ನ: ಕಾಮಗಾರಿ ಶೀಘ್ರ ಆರಂಭಕ್ಕೆ ಡಿಕೆಶಿ ಭರವಸೆ

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ಅವರು ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವಿಶೇಷ ಅಧಿವೇಶನದ ಸಂದರ್ಭದಲ್ಲಿ ತಾವು ಮತ್ತು ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದರು.

ಈ ಭೇಟಿಯ ಪ್ರಮುಖ ಉದ್ದೇಶ ಆರ್‌ಆರ್ ನಗರ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಕುರಿತು ಮನವಿ ಸಲ್ಲಿಸುವುದಾಗಿತ್ತು. ಮುನಿರತ್ನ ಅವರ ಹೇಳಿಕೆಯ ಪ್ರಕಾರ, ತಮ್ಮ ಕ್ಷೇತ್ರದಲ್ಲಿ ಸೇತುವೆಗಳು, ಜಾಲಹಳ್ಳಿ ಸರ್ಕಲ್, ಶಾಲೆಗಳ ನಿರ್ಮಾಣ, ಆಸ್ಪತ್ರೆ ಮತ್ತು ಈಜುಕೊಳದಂತಹ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ.

ಈ ಯೋಜನೆಗಳೆಲ್ಲವೂ ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಗತಿಯನ್ನು ಕಾಣದೆ ಸ್ಥಗಿತಗೊಂಡಿವೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಅರ್ಧಗಂಟೆ ಸಮಯ ಕೋರಿ, ಇಂದು ಅವರ ಕಚೇರಿಗೆ ಭೇಟಿ ನೀಡಿ ಸ್ಥಗಿತಗೊಂಡಿರುವ ಕಾಮಗಾರಿಗಳ ಸಮಗ್ರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾಮಗಾರಿಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಭರವಸೆಯ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದ್ದು, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟರೆ ಬೇರೆ ಎರಡನೇ ಮಾತು ಯಾವುದು ಇಲ್ಲ. ನನ್ನ ಕಾನ್‌ಸ್ಟಿಟ್ಯುಯೆನ್ಸಿಗೋಸ್ಕರ ನಾನು ಯಾರ ಕಾಲು ಬೇಕಾದರೂ ಹಿಡಿಕೊಳ್ತೀನಿ ಅಂತ ನಾನು ಹಿಂದೆ ಒಂದು ಸಾರಿ ಹೇಳಿದ್ದೆ. ನನ್ನ ಕಾನ್‌ಸ್ಟಿಟ್ಯುಯೆನ್ಸಿಗೋಸ್ಕರ ನಾನು ಎಲ್ಲಿ ಬೇಕಾದರೂ ಬಂದು ಬೇಡಿಕೊಳ್ಳಲು ಸಿದ್ಧನಾಗಿದ್ದೇನೆ,” ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular