ಚಾಮರಾಜನಗರ :ಪಿ.ಜಿ. ಪಾಳ್ಯ ಸಫಾರಿಯಲ್ಲಿ ಕರಿ ಚಿರತೆ ಬಳಿಕ ಶುಕ್ರವಾರದಂದು ಬಿಳಿ ಜಿಂಕೆ ಕಾಣಿಸಿಕೊಂಡಿದ್ದು ಸಫಾರಿಗರು ರೋಮಾಂಚಿತರಾಗಿದ್ದಾರೆ.ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ. ಪಾಳ್ಯ ಸಫಾರಿಯಲ್ಲಿ ಇತ್ತೀಚೆಗೆ ಅಪರೂಪದ ಪ್ರಾಣಿಗಳ ದರ್ಶನವಾಗುತ್ತಿದ್ದು, ಸಫಾರಿಗರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಕರಿ ಚಿರತೆ (ಬ್ಲ್ಯಾಕ್ ಪ್ಯಾಂಥರ್) ಕಾಣಿಸಿಕೊಂಡಿದ್ದು, ಅದರ ಬಳಿಕ ಸತತ ಎರಡು ದಿನಗಳ ಕಾಲವೂ ಇದೇ ಪ್ರಾಣಿ ಸಫಾರಿಯಲ್ಲಿ ದರ್ಶನ ನೀಡಿದೆ. ಈ ದೃಶ್ಯಗಳು ಪ್ರವಾಸಿಗರಲ್ಲಿ ವಿಶೇಷ ಉತ್ಸಾಹ ಹುಟ್ಟಿಸಿವೆ. ಕರಿ ಚಿರತೆ ಮತ್ತೊಂದು ಚಿರತೆಯೊಂದಿಗೆ ಚಿನ್ನಾಟ ಆಡುತ್ತಿದ್ದ ಅಪರೂಪದ ಕ್ಷಣವನ್ನು ಸಫಾರಿಗರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
ಸಾಮಾನ್ಯವಾಗಿ ನಾಗರಹೊಳೆ ಸಫಾರಿಯಲ್ಲಿ ಮಾತ್ರ ಕರಿ ಚಿರತೆ ಕಾಣಿಸಿಕೊಳ್ಳುತ್ತಿದ್ದರೆ, ಈಗ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿಯೂ ಅದರ ದರ್ಶನವಾಗುತ್ತಿರುವುದು ವಿಶೇಷವೆಂದು ತಿಳಿದುಬಂದಿದೆ.
ಇದರೊಂದಿಗೆ ಬಿಳಿ ಜಿಂಕೆ ಕಾಣಿಸಿಕೊಂಡಿದ್ದು, ಸಫಾರಿಗರಲ್ಲಿ ಮತ್ತಷ್ಟು ರೋಮಾಂಚನ ಮೂಡಿಸಿದೆ. ಹನೂರು ಬಫರ್ ಜೋನ್ ವ್ಯಾಪ್ತಿಯಲ್ಲಿ ಸಫಾರಿಗೆ ತೆರಳಿದ್ದ ವೇಳೆ ಈ ಅಪರೂಪದ ಜಿಂಕೆ ದರ್ಶನವಾಗಿದ್ದು, ಪ್ರವಾಸಿಗರು ಪುಳಕಿತರಾಗಿದ್ದಾರೆ.
ಇದುವರೆಗೆ ಸಫಾರಿಗರು ಆನೆ, ಹುಲಿ, ಕಾಡೆಮ್ಮೆಗಳನ್ನು ಕಂಡು ಆನಂದಿಸುತ್ತಿದ್ದರೆ, ಇದೀಗ ಕರಿ ಚಿರತೆ ಹಾಗೂ ಬಿಳಿ ಜಿಂಕೆಯಂತಹ ಅಪರೂಪದ ಪ್ರಾಣಿಗಳ ಸೈಟಿಂಗ್ಗಳಿಂದ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿದೆ



