ನವದೆಹಲಿ: ಜಾಗತಿಕ ಮತ್ತು ದೇಶೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಹಾಗೂ ಬಲಿಷ್ಠ ಪ್ರದರ್ಶನ ನೀಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್ಗಳ ಸಂಘದ (IBA) ‘ರಿಸ್ಕ್ ಮ್ಯಾನೇಜ್ಮೆಂಟ್’ (ಅಪಾಯ ನಿರ್ವಹಣೆ) ಕುರಿತ ಮೊದಲ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬ್ಯಾಂಕುಗಳಲ್ಲಿ ಅಪಾಯ ನಿರ್ವಹಣೆಯನ್ನು ಕೇವಲ ಒಂದು ಔಪಚಾರಿಕ ಪ್ರಕ್ರಿಯೆಯಾಗಿ ನೋಡಬಾರದು, ಬದಲಿಗೆ ಅದನ್ನು ಒಂದು ಕಾರ್ಯತಂತ್ರದ ಜವಾಬ್ದಾರಿಯಾಗಿ ಸ್ವೀಕರಿಸಬೇಕು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಪ್ರತಿಯೊಂದು ಕಾರ್ಯದಲ್ಲೂ ಅಳವಡಿಸಿಕೊಳ್ಳಬೇಕು ಎಂದು ನಾಗರಾಜು ಹೇಳಿದರು.
ಎಸ್ಬಿಐ ಅಧ್ಯಕ್ಷರಾದ ಚಲ್ಲಾ ಶ್ರೀನಿವಾಸುಲು ಶೆಟ್ಟಿ ಮಾತನಾಡಿ, “ಹೊಸ ಮತ್ತು ಉದಯೋನ್ಮುಖ ಅಪಾಯಗಳು ಸಂಕೀರ್ಣವಾಗುತ್ತಿವೆ. ಆದರೆ ಬ್ಯಾಂಕುಗಳು ತಮ್ಮ ಮೂಲ ಕಾರ್ಯಾಚರಣೆಯ ಅಪಾಯಗಳನ್ನು (Core Operational Risks) ನಿರ್ಲಕ್ಷಿಸಬಾರದು,” ಎಂದು ತಿಳಿಸಿದರು.
ಐಬಿಎ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಮುರಳಿ ಭಗತ್ ಅವರು, ಈ ಶೃಂಗಸಭೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾಯ ನಿರ್ವಹಣೆಯ ಬಗ್ಗೆ ಹೊಸ ಆಲೋಚನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ವೇದಿಕೆಯಾಗಿದೆ ಎಂದರು.
ಸಾರ್ವಜನಿಕ, ಖಾಸಗಿ, ವಿದೇಶಿ ಮತ್ತು ಸಹಕಾರಿ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದರು.
ದೇಶಾದ್ಯಂತ ಬಂದ 650ಕ್ಕೂ ಹೆಚ್ಚು ಪ್ರಬಂಧಗಳಲ್ಲಿ ಆಯ್ದ 30 ಅತ್ಯುತ್ತಮ ಪ್ರಬಂಧಗಳ ಸ್ಮರಣ ಸಂಚಿಕೆಯನ್ನು ನಾಗರಾಜು ಬಿಡುಗಡೆ ಮಾಡಿದರು.
ಅಪಾಯ ನಿರ್ವಹಣಾ ಪ್ರಕ್ರಿಯೆಗಳ ಕುರಿತಾದ ಸಮೀಕ್ಷಾ ವರದಿಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಬ್ಯಾಂಕಿಂಗ್ ವೃತ್ತಿಪರರ ಸಾಮೂಹಿಕ ಪರಿಣತಿಯು ಭವಿಷ್ಯದ ಹಣಕಾಸು ಕ್ಷೇತ್ರದ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಾಗರಾಜು ಈ ಸಂದರ್ಭದಲ್ಲಿ ಶ್ಲಾಘಿಸಿದರು. (ಏಜೆನ್ಸಿಸ್)



