Wednesday, July 1, 2026
Google search engine

Homeದೇಶ'ಡಿಜಿಟಲ್ ಇಂಡಿಯಾ' ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ

‘ಡಿಜಿಟಲ್ ಇಂಡಿಯಾ’ ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ಭಾರತದ ಭದ್ರ ಬುನಾದಿ: ಪ್ರಧಾನಿ ಮೋದಿ

ನವದೆಹಲಿ: ‘ಡಿಜಿಟಲ್ ಇಂಡಿಯಾ’ ಅಭಿಯಾನಕ್ಕೆ 11 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಈ ಉಪಕ್ರಮವು ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ (ಸ್ವಾವಲಂಬಿ) ಭಾರತದ ಭದ್ರ ಬುನಾದಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಈ ಅಭಿಯಾನವು ಬಡವರು ಮತ್ತು ವಂಚಿತರ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ದೇಶದ ನಾಗರಿಕರ ಜೀವನವನ್ನು ಸುಲಭಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಈ ಕುರಿತು ಹಂಚಿಕೊಂಡಿರುವ ಅವರು ಡಿಜಿಟಲ್ ಇಂಡಿಯಾವು ಆಡಳಿತ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸಿದೆ. ಪಾರದರ್ಶಕ ಡಿಜಿಟಲ್ ಪಾವತಿಗಳು ಮತ್ತು ನೇರ ಲಾಭ ವರ್ಗಾವಣೆ (DBT) ಮೂಲಕ ತಂತ್ರಜ್ಞಾನವು ಜನರ ಜೀವನವನ್ನು ಸುಗಮಗೊಳಿಸುವ ಪ್ರಬಲ ಮಾಧ್ಯಮವಾಗಿದೆ.

ಈ ಅಭಿಯಾನವು ನಾವೀನ್ಯತೆಯ ಅಲೆಗಳನ್ನು ದೇಶದ ಮೂಲೆ ಮೂಲೆಗೂ, ವಿಶೇಷವಾಗಿ ಹಳ್ಳಿಗಳು ಮತ್ತು ಟಿಯರ್-2, ಟಿಯರ್-3 ನಗರಗಳಿಗೆ ಕೊಂಡೊಯ್ದಿದೆ. ಯುವ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಇಂದು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ ಮತ್ತು ಸಾರ್ವಜನಿಕ ಸೇವೆಗಳನ್ನು ಈ ಉಪಕ್ರಮವು ಬಲಪಡಿಸಿದೆ. ಭಾರತವು ಇದೀಗ ಎಐ (AI), ಸೆಮಿಕಂಡಕ್ಟರ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ.

ಡಿಜಿಟಲ್ ಇಂಡಿಯಾದ ಯಶಸ್ಸು ಇಡೀ ಜಗತ್ತಿನ ಗಮನವನ್ನು ಭಾರತದತ್ತ ಸೆಳೆದಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಭಾರತೀಯರ ಸಂಕಲ್ಪಶಕ್ತಿಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಸಂಸ್ಕೃತ ಶ್ಲೋಕದ ಮೂಲಕ ಸಂದೇಶ

ಈ ಸಂದರ್ಭದಲ್ಲಿ ಪ್ರಧಾನಿಯವರು ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ. “ವಿಜ್ಞಾನಸಾರಥಿರ್ಯಸ್ತು ಮನಃಪ್ರಗ್ರಹವಾನ್ನರಃ | ಸೋಽಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್ ||” (“ಯಾವ ಮನುಷ್ಯನ ವಿವೇಕಯುತ ಬುದ್ಧಿಯು ವೈಜ್ಞಾನಿಕ ಸಾರಥಿಯಂತೆ ಜಾಗೃತವಾಗಿರುತ್ತದೆಯೋ ಮತ್ತು ಮನಸ್ಸು ನಿಯಂತ್ರಣದಲ್ಲಿರುತ್ತದೆಯೋ, ಅಂತಹ ವ್ಯಕ್ತಿಯು ಜೀವನದ ಕಠಿಣ ಹಾದಿಯನ್ನು ದಾಟಿ ಪರಮ ಗುರಿಯನ್ನು ತಲುಪುತ್ತಾನೆ”)

ಭವಿಷ್ಯದಲ್ಲಿ ತಂತ್ರಜ್ಞಾನವು ಮಾನವೀಯತೆಯ ಸೇವೆಗೆ, ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವಂತೆ ಮಾಡುವುದೇ ತಮ್ಮ ಸರ್ಕಾರದ ಗುರಿ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular