ಮೈಸೂರು : ಆರ್.ಕೆ.ಲಕ್ಷ್ಮಣ ಅವರ ರೇಖಾಚಿತ್ರಗಳು ಸಾಮಾನ್ಯ ವ್ಯಕ್ತಿ ಪ್ರಜ್ಞೆ ಮತ್ತು ಸಂವೇದನೆಯ ಪ್ರತೀಕವಾಗಿದ್ದು, ಕಲೆಯ ಅಪೂರ್ವ ಸಂಪತ್ತಾಗಿದೆ ಎಂದು ಅಂತಾರಾಷ್ಟ್ರೀಯ ಕಲಾವಿದ ಎಂ.ಎಸ್.ಮೂರ್ತಿ ಹೇಳಿದರು.
ನಗರದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರಿನ ವಿಶ್ವವಿದ್ಯಾನಿಲಯದ ಪೂರ್ಣಚಂದ್ರ ಕನ್ನಡ ಅಧ್ಯಯನ ವಿಭಾಗ, ಕುವೆಂಪು ಕಾವ್ಯಾಧ್ಯುಂನ ಪೀಠ, ಮಹಾರಾಜ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಹೊರ ತಂದಿರುವ ‘ಲಕ್ಷ್ಮಣ ರೇಖೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯ ಜ್ಞಾನದ, ಸಾಮಾನ್ಯ ವ್ಯಕ್ತಿಗಳ ಜೀವನ ಗಮನಿಸಿದ ಪ್ರಜ್ಞೆಯ ಸಂಕೇತವಾಗಿವೆ. ಕುವೆಂಪು ಅವರ ಪದ್ಯಗಳಿಗೆ ಲಕ್ಷ್ಮಣ ರೇಖಾಚಿತ್ರಗಳನ್ನು ಬಿಡಿಸಿರುವುದು ಕೇವಲ ಚಿತ್ರಣವಲ್ಲ. ಅದು ಚಾರಿತ್ರಿಕ ದಾಖಲೆ. ಸುಮಾರು ಐವತ್ತು ವರ್ಷಗಳ ಹಿಂದೆ ಕಾವ್ಯ ಮತ್ತು ದೃಶ್ಯಕಲೆಯ ನಡುವೆ ನಿರ್ವಾಣವಾದ ಅನುಸಂಧಾನ ಇಂದಿನ ತಲೆವಾರಿಗೆ ದಾಟಿಸಬೇಕಾದ ಅಮೂಲ್ಯ ಸಂಪತ್ತಾಗಿ ಪುಸ್ತಕವನ್ನು ಹೊರ ತರಲಾಗಿದೆ ಎಂದು ಹೇಳಿದರು.
ಸುಮಾರು ೫೦ ವರ್ಷಗಳ ಹಿಂದೆ ಕಲಾವಿದನೊಬ್ಬ ಕಾವ್ಯ ಸ್ಪಂದಿಸುವ ಮೂಲಕ ಕೆಲ ಮತ್ತು ಕಾವ್ಯಕ್ಕೆ ಆಗಿರುವ ಅನುಸಂಧಾನಕ್ಕೆ ಕೃತಿ ಸಾಕ್ಷಿಯಾಗಿದೆ. ಇಂದು ಕಿಂದರಿ ಜೋಗಿ ಕೃತಿಯನ್ನು ಓದುತ್ತ ಲಕ್ಷ್ಮಣ ಅವರ ರೇಖಾ ಚಿತ್ರಗಳನ್ನು ಗಮನಿಸಿದಾಗ ಕುವೆಂಪು ಅವರೇ ಲಕ್ಷ್ಮಣ ಅವರ ರೇಖೆಗಳಿಗೆ ಪದ್ಯ ಬರೆದಿದ್ದರೇನೋ ಅನಿಸಲಿದೆ ಎಂದರು.
ದೃಶ್ಯ ಕಲೆ ಸಾಮಾನ್ಯ ಜ್ಞಾನದ ಪ್ರತೀಕ. ಜಾನಪದ ತಳಹದಿಯ ಮೇಲೆ ನಿಂತಿರುವ ಸಂವೇಶನ ಪ್ರತಿಕ್ರಿಯೆ. ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಕ್ಷರ ಜನರನ್ನು ತಲುಪಿದ ರೀತಿಯಲ್ಲಿ ರೇಖಾ ಚಿತ್ರಗಳು ತಲುಪಲು ಸಾಧ್ಯವಾಗಿಲ್ಲ. ದೃಶ್ಯಕಲೆ ಕಲಾವಿದ ಇದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದರು.
ಸಾಂಸ್ಕೃತಿಕ ವಲಯವೂ ಕೂಡ ಸಾಮಾನ್ಯ ಜ್ಞಾನವನ್ನು ಆಳುವ ಸ್ಥಿತಿ ಬಂದೋದಾಗಿದೆ. ಪ್ರಸ್ತುತ ಸಾಂಸ್ಕೃತಿಕ ಸಂದರ್ಭದಲ್ಲಿ ಮಾತು ಮತ್ತು ಅಕ್ಷರವನ್ನು ಸಂವಾದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಅಕ್ಷರ ಪ್ರಜ್ಞೆಯ ಮೀರಿದ ಅಲೋಚನ ಕ್ರಮವಿದೆ ಎನ್ನುವುದನ್ನು ಕೃತಿ ಎತ್ತಿಹಿಡಿದಿದೆ ಎಂದರು.
ರೇಖೆ ಎನ್ನುವುದು ದೃಶ್ಯಕಲೆಯ ವ್ಯಾಕರಣವಾಗಿದ್ದು, ಅದನ್ನು ಲಕ್ಷ್ಮಣ ಅವರು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡು ದೇಶದ ಜನ ಸಾಮಾನ್ಯ ಅಲೋಚನ ಕ್ರಮ, ನಾಡಿ ಮಿಡಿತ, ಸಂವೇದನೆ ಮತ್ತು ರಾಜಕೀಯ, ಸಾವಾಜಿಕ ಸ್ಥಿತಿಗತಿಗಳನ್ನು ಪ್ರತಿಕ್ರಿಯೆಗಳನ್ನು ಮಾರ್ಮಿಕವಾಗಿ ಅಭಿವ್ಯಕ್ತಿಸಿದ್ದಾರೆ. ಕನ್ನಡದ ಮಟ್ಟಿಗೆ ಲಕ್ಷ್ಮಣ ಅವರು ತಲುಪಿಲ್ಲ ಎನ್ನುವ ಅಭಿಪ್ರಾಯವಿದೆ. ಹೀಗಾಗಿ ಸಾಹಿತ್ಯ ಮತ್ತು ಕಲೆಯ ನಡುವೆ ಇನ್ನಷ್ಟು ಸಂವಾದ ಮತ್ತು ಅನುಸಂಧಾನ ಅಗತ್ಯ ಎಂದರು.
ಲೇಖಕಿ ತಾರಿಣಿ ಚಿದಾನಂದ ಗೌಡ ಮಾತನಾಡಿ, ಕುವೆಂಪು ಅವರ ‘ಕಿಂದರಿ ಜೋಗಿ’ ಪದ್ಯ ಬರೆಯಲ್ಪಟ್ಟು ಶತಮಾನ ಕಳೆದಿರಬಹುದು. ಆದರೆ ಇಂದಿಗೂ ಅದಕ್ಕೆ ಲಕ್ಷ್ಮಣ್ ಬರೆದ ರೇಖಾಚಿತ್ರಗಳು ಹೊಸತನ ತಂದು ಕೊಟ್ಟಿವೆ. ಮಕ್ಕಳಿಗೆ ಅವು ಹೆಚ್ಚು ಹತ್ತಿರವಾಗುತ್ತವೆ ಎಂದರು.
ಲಕ್ಷ್ಮಣ ರೇಖಾಚಿತ್ರಗಳನ್ನು ಕಂಡು ಕುವೆಂಪು ಅವರು ಖುಷಿ ಪಡುತ್ತಿದ್ದರು. ತೇಜಸ್ವಿ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ತೇಜಸ್ವಿ ಚಿಕ್ಕ ವಯಸ್ಸಿನಲ್ಲಿ ರೇಖಾ ಚಿತ್ರಗಳನ್ನು ಬಿಡಿಸುತ್ತಿದ್ದ. ಎಲ್ಲರು ಸಾಹಿತಿ…ಸಾಹಿತಿ…ಎಂದ ಕಾರಣ ಸಾಹಿತ್ಯ ಕಡೆಗೆ ಹೋದೆ, ನಾನು ಮೂಲತಃ ರೇಖಾಚಿತ್ರಗಾರ ಎಂದು ಒಂದು ಕಡೆ ನನಗೆ ತಿಳಿಸಿದ್ದನು ಎಂದು ಸ್ಮರಿಸಿದರು.
ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಕೆ.ಸಿ.ಶಿವಾರೆಡ್ಡಿ ಮಾತನಾಡಿ, ಕುವೆಂಪು ಅವರ ಕಾವ್ಯದಲ್ಲಿ ಕಾಣಿಸಿಕೊಳ್ಳುವ ಕಾಗೆ, ಗೂಬೆ ಮುಂತಾದ ಸಾವಾನ್ಯ ಜೀವಿಗಳಲ್ಲೂ ಆಳವಾದ ತಾತ್ವಿಕತೆ ಮತ್ತು ವಾನವೀಯತೆಯನ್ನು ಕಂಡುಕೊಂಡಿದ್ದರು. ಲಕ್ಷ್ಮಣ್ ಕೂಡ ಸಾಮಾನ್ಯ ವ್ಯಕ್ತಿಯ ಬದುಕಿನೊಳಗಿನ ಸಂವೇದನೆಗಳನ್ನು ತಮ್ಮ ರೇಖೆಗಳಲ್ಲಿ ಹಿಡಿದಿಟ್ಟಿದ್ದಾರೆ ಎಂದು ಹೇಳಿದರು.
ಇಂಗ್ಲಿಷ್ ಓದುಗರಿಗಷ್ಟೇ ಲಕ್ಷ್ಮಣ್ ಸೀಮಿತರಾಗಿದ್ದಾರೆ ಎನ್ನುವ ಭಾವನೆಯನ್ನು ಹೋಗಲಾಡಿಸಿ, ಕನ್ನಡ ಓದುಗರಿಗೂ ಅವರ ಕಲಾಸಂಪತ್ತನ್ನು ತಲುಪಿಸುವ ಆಶಯದಿಂದ ಪುಸ್ತಕ ಹೊರತಂದಿದ್ದೇವೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಚಿದಾನಂದ ಗೌಡ, ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್.ಶ್ರೀರಾಮ, ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ, ಆರ್.ಕೆ.ಲಕ್ಷ್ಮಣ ಫೌಂಡೇಷನ್ನ ಅಧ್ಯಕ್ಷ ಉಷಾ ಲಕ್ಷ್ಮಣ್, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ.ನರೇಂದ್ರ ಇತರರು ಹಾಜರಿದ್ದರು.



