ಕೆ.ಆರ್.ನಗರ : ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಒಂದು ವಾರದ ಹಿಂದೆ ವಿದ್ಯುತ್ ಸ್ಪರ್ಶದಿಂದ ಆಕಸ್ಮಿಕವಾಗಿ ಮೃತಪಟ್ಟ ಪುನೀತ್ (21) ಅವರ ಮನೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತನ ತಂದೆ ರಮೇಶ್ ಮತ್ತು ತಾಯಿ ಸುನಂದ ಅವರೊಂದಿಗೆ ಮಾತನಾಡಿದ ಮಾಜಿ ಸಚಿವರು ಆಕಸ್ಮಿಕ ಘಟನೆಯಿಂದ ನಿಮ್ಮ ಮಗ ಸಾವನ್ನಪ್ಪಿದ್ದು ನೋವನ್ನು ಮರೆಯುವ ಶಕ್ತಿ ನಿಮಗೆ ದೊರೆಯಲಿ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಮುಖಂಡ ಸ್ಟುಡಿಯೋ ಲೋಕೇಶ್ ಮಾಜಿ ಸಚಿವರೊಂದಿಗೆ ಮಾತನಾಡಿ ಮೃತಪಟ್ಟ ಪುನೀತ್ ಅವರ ಕುಟುಂಬಸ್ಥರ ಸಂಕಷ್ಟ ಮತ್ತು ನೋವಿನ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟಾಗ ಇದಕ್ಕೆ ಸ್ಪಂದಿಸಿದ ಸಾ.ರಾ.ಮಹೇಶ್ ನೊಂದ ಕುಟುಂಬದವರಿಗೆ ವೈಯುಕ್ತಿಕವಾಗಿ ಧನಸಹಾಯ ಮಾಡಿದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ ಘಟನೆಗಳು ನಡೆದು ಮಗನನ್ನು ಕಳೆದುಕೊಂಡ ಕುಟುಂಬದವರಿಗೆ ನಾನು ಮಾನವೀಯತೆಯಿಂದ ಸಾಂತ್ವಾನ ಹೇಳಲು ಬಂದಿದ್ದು ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲವೆಂದರಲ್ಲದೆ ನೊಂದ ಕುಟುಂಬದ ಜತೆ ಗ್ರಾಮಸ್ಥರು ನಿಲ್ಲಬೇಕೆಂದರು.



