ಗುಂಡ್ಲುಪೇಟೆ : ಕೆಲಸದ ಅವಧಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಖಾಸಗಿ ಜೀಪ್ ನಲ್ಲಿ ತಮ್ಮ ಕುಟುಂಬ ಸಮೇತ ಜಾಲಿ ರೈಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಮ್ಮ ಕುಟುಂಬದೊಡನೆ ಖಾಸಗಿ ಜಿಪಿನಲ್ಲಿ ಮೋಜು ಮಸ್ತಿ ಮಾಡಿದವರಾಗಿದ್ದು, ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವಾಹನಗಳಿಗೆ ಮಾತ್ರ ಅವಕಾಶವಿರಲಿದೆ. ಆದರೆ ಸರ್ಕಲ್ ಇನ್ಸ್ಪೆಕ್ಟರ್ ಅವರು ಅರಣ್ಯ ಇಲಾಖೆಯ ನಿಯಮವನ್ನು ಗಾಳಿಗೆ ತೂರಿ ಅಲ್ಲಿ ಖಾಸಗಿ ವಾಹನವನ್ನು ಚಲಾಯಿಸಿದ್ದಾರೆ. ಅಲ್ಲದೆ ಇವರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಖಾಸಗಿ ವಾಹನ ಚಾಲನೆಗೆ ಹೇಗೆ ಅವಕಾಶ ಮಾಡಿಕೊಟ್ಟರು ? ಅರಣ್ಯ ಸಿಬ್ಬಂದಿ ಪೊಲೀಸರಿಗೆ ಒಂದು ನ್ಯಾಯ ಸಾರ್ವಜನಿಕರಿಗೆ ಒಂದು ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಧರಿಸಿ ಅರಣ್ಯದೊಳಗೆ ಖಾಸಗಿ ವಾಹನ ಚಾಲನೆ ಮಾಡಿ, ಮೋಜು-ಮಸ್ತಿ ಮಾಡಿದ್ದಾರೆ. ಇವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತ ನಮೋ ಮಂಜು ಹಾಗೂ ಇತರರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



