ನವದೆಹಲಿ : ‘ಆಪರೇಷನ್ ಸಿಂದೂರ್’ನ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಸ್ಮರಿಸಿದ್ದಾರೆ. ಸೇನೆಯ ಧೈರ್ಯ ಮತ್ತು ಸಮರ್ಪಣಾ ಭಾವವು ದೇಶದ ಭದ್ರತೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ. ‘ಆಪರೇಷನ್ ಸಿಂದೂರ್’ ರಾಷ್ಟ್ರೀಯ ಸಂಕಲ್ಪ ಮತ್ತು ಸನ್ನದ್ಧತೆಯ ಪ್ರಬಲ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಗುರುವಾರ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ‘ಎಕ್ಸ್’ (X) ನಲ್ಲಿ ಬರೆದುಕೊಂಡಿರುವ ರಾಜನಾಥ್ ಸಿಂಗ್ “ಆಪರೇಷನ್ ಸಿಂದೂರ್ ವಾರ್ಷಿಕೋತ್ಸವದಂದು ನಾವು ನಮ್ಮ ಸಶಸ್ತ್ರ ಪಡೆಗಳ ವೀರತ್ವಕ್ಕೆ ನಮನ ಸಲ್ಲಿಸುತ್ತೇವೆ. ಅವರ ಸಾಹಸ ಮತ್ತು ಸಮರ್ಪಣೆ ರಾಷ್ಟ್ರದ ರಕ್ಷಣೆಯನ್ನು ಖಚಿತಪಡಿಸುತ್ತಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಯು ಅಪ್ರತಿಮ ನಿಖರತೆ, ಅತ್ಯುತ್ತಮ ಸಮನ್ವಯ ಮತ್ತು ಮೂರು ಸೇನಾಪಡೆಗಳ ನಡುವಿನ ಆಳವಾದ ಒಗ್ಗಟ್ಟನ್ನು ಪ್ರದರ್ಶಿಸಿದೆ. ಇದು ಆಧುನಿಕ ಮಿಲಿಟರಿ ಕಾರ್ಯಾಚರಣೆಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ.” ಈ ಕಾರ್ಯಾಚರಣೆಯು ಭಾರತದ ‘ಆತ್ಮನಿರ್ಭರತೆ’ಯ ಹಾದಿಯಲ್ಲಿ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದು, ಅದರಲ್ಲಿ ಭಯೋತ್ಪಾದನೆಯ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ: “ಭಾರತವು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡಾಗ, ಭಯೋತ್ಪಾದಕರಿಗೆ ಮತ್ತು ಅವರ ಆಕಾಗಳಿಗೆ (ಬೆಂಬಲಿಗರಿಗೆ) ಗಡಿಯ ಆಚೆಗಿನ ಭೂಮಿಯೂ ಸುರಕ್ಷಿತವಾಗಿರುವುದಿಲ್ಲ” ಎಂದಿದ್ದಾರೆ.



