ಮೈಸೂರು : ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ನಡೆದುಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮೈಸೂರಿನ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ವಿಹಿಂಪ ಮೈಸೂರು ಜಿಲ್ಲಾಧ್ಯಕ್ಷ ಕೆ. ಮಹೇಶ ಕಾಮತ್ ಮಾತನಾಡಿ ಲೆನ್ಸ ಕಾರ್ಟ್ ಮುಂಬೈ ಮಳಿಗೆಯಲ್ಲಿ ಹಿಂದೂ ಮಹಿಳೆಯರಿಗೆ ಬಲವಂತವಾಗಿ ಹಣೆ ಬೊಟ್ಟು ,ತಿಲಕವನ್ನು ಹಾಕಬಾರದೆಂದು ಆದೇಶಿಸಿರುವುದನ್ನು ಖಂಡಿಸುತ್ತೇವೆ, ಹಿಂದೂಗಳು ಕೆಲಸಕ್ಕೆ ಬೇಕು ಆದರೆ ಅವರವರ ಧರ್ಮದಂತೆ ಇರಬಾರದೆನ್ನುವುದು ಎಷ್ಟರ ಮಟ್ಟಿಗೆ ಸರಿ ? ಇದೇ ರೀತಿ ಹಿಂದೂ ಮಳಿಗೆಯಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ಹಾಕಿಬರಬಾರದೆಂದರೆ ಅವರ ಪರಿಸ್ಥಿತಿ ಹೇಗಿರಬಹುದು? ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬೆಂಗಳೂರಿನ ಕೋರಮಂಗಲದ ಕೃಪಾನಿಧಿ ಶಾಲೆ ಮತ್ತು ನಾಗಾರ್ಜುನ ಎಜ್ಯುಕೇಷನ್ ಸೊಸೈಟಿಯವರು ಸಿಇಟಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ್ದನ್ನು ನೇರವಾಗಿ ಖಂಡಿಸಿದ ಅವರು. ಜನಿವಾರ ಕೇವಲ ದಾರವಲ್ಲ ಅದು ಹಿಂದೂ ಸಂಪ್ರದಾಯದ ಪವಿತ್ರ ಧಾರಣೆ , ಧಾರ್ಮಿಕ ಪರಂಪರೆ, ಸಂಸ್ಕ್ರತಿ ಹಾಗೂ ಗೌರವದ ಪ್ರತೀಕವಾಗಿದ್ದು ವರ್ಷಪೂರ್ತಿ ಅಧ್ಯಯನ ಮಾಡಿ ಪರೀಕ್ಷೆ ಬರೆಯಲು ಬಂದಾಗ ಏಕಾ ಏಕಿ ಜನಿವಾರ ಕತ್ತರಿಸುತ್ತೇವೆ ಎಂದಿರುವುದು ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗಿದೆ. ಸರ್ಕಾರವು ಇಂತಹ ಸಂಸ್ಥೆಗಳ ಮೇಲೆ ಸ್ವಯಂ ದೂರು ದಾಖಲಿಸಿ ಸರಿಯಾದ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದರು.
ನಾಸಿಕ್ ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಜಾಲದ “ಕಾರ್ಪೋರೇಟ್ ಜಿಹಾದ್ “ ಹಾಗೂ ರಾಜ್ಯದಲ್ಲಿ ವರದಿಯಾಗುತ್ತಿರುವ ಲವ್ ಜಿಹಾದ್ ಪ್ರಕರಣವನ್ನು ಖಂಡಿಸುತ್ತೇವೆ. ದೇಶಾದ್ಯಂತ ವ್ಯವಸ್ಥಿತವಾಗಿ ಹರಡುತ್ತಿರುವ ಇಂತಹ ಜಾಲವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಧು ಶಂಕರ್, ಸಹ ಕಾರ್ಯದರ್ಶಿ ಜಯಶ್ರೀ ಹಾಗೂ ಹಲವಾರು ಮುಖಂಡರು ಹಾಜರಿದ್ದರು.



