ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನ ಜನತೆಗೆ ಮಹತ್ವದ ಘೋಷಣೆ ಮಾಡಿದ್ದು, ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಲು ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಭಾರಿ ರಿಯಾಯಿತಿ ನೀಡಿದೆ. ಸಾಮಾನ್ಯವಾಗಿ ಆಸ್ತಿ ಮೇಲಿನ ಗೈಡ್ಲೈನ್ಸ್ ವ್ಯಾಲ್ಯೂನ ಶೇ.5ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ 100 ದಿನಗಳ “ಸುವರ್ಣ ಅವಕಾಶ” ಯೋಜನೆಯಡಿ ಅದನ್ನು ಶೇ.2ಕ್ಕೆ ಇಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ನಾಗರಿಕರಿಗೆ ಈ ಸೌಲಭ್ಯ ಲಭ್ಯವಾಗಲಿದ್ದು, ಇದರಿಂದ ಶೇ.60ರಷ್ಟು ರಿಯಾಯಿತಿ ದೊರೆಯಲಿದೆ ಎಂದರು. ಉದಾಹರಣೆಗೆ, 1 ಕೋಟಿ ರೂ. ಮೌಲ್ಯದ ಆಸ್ತಿಗೆ ಈ ಹಿಂದೆ 5 ಲಕ್ಷ ರೂ. ಶುಲ್ಕ ಕಟ್ಟಬೇಕಾಗಿದ್ದರೆ, ಈಗ ಕೇವಲ 2 ಲಕ್ಷ ರೂ. ಪಾವತಿಸಿದರೆ ಸಾಕಾಗುತ್ತದೆ ಎಂದು ವಿವರಿಸಿದರು.
“ನಮ್ಮ ಖಾತೆ – ನಮ್ಮ ಹಕ್ಕು” ಅಭಿಯಾನದಡಿ ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ಮನೆ ಬಾಗಿಲಲ್ಲೇ ಆಸ್ತಿ ಹಕ್ಕು ದೊರಕುವಂತೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಒಟ್ಟು 7 ಲಕ್ಷ ಬಿ ಖಾತೆಗಳಿದ್ದು, ಅವುಗಳನ್ನು ಎ ಖಾತೆಗೆ ಪರಿವರ್ತಿಸಲು ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೇ 16ರಿಂದ ಪ್ರತಿ ಶನಿವಾರ “ನನ್ನ ಖಾತಾ – ನನ್ನ ಹಕ್ಕು” ಇ-ಖಾತಾ ಸಿಟಿಜನ್ ಓಪನ್ ಹೌಸ್ ಕಾರ್ಯಕ್ರಮ ನಡೆಯಲಿದ್ದು, 5 ನಗರ ಪಾಲಿಕೆಗಳ ವಾರ್ಡ್ ಕಚೇರಿಗಳು ಹಾಗೂ ಶಾಲಾ ಆವರಣ ಸೇರಿ 50 ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ಶನಿವಾರ ಸುಮಾರು 5 ಸಾವಿರ ಜನರಿಗೆ ನೇರ ನೆರವು ನೀಡುವ ಗುರಿ ಹೊಂದಲಾಗಿದೆ.
ಇದೇ ವೇಳೆ, ಕಟ್ಟಡ ಉಲ್ಲಂಘನೆ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸುವ ನಿರ್ಧಾರವನ್ನೂ ಸರ್ಕಾರ ಪ್ರಕಟಿಸಿದೆ. ಇದರಿಂದ ಒಸಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಸಾವಿರಾರು ಕಟ್ಟಡ ಮಾಲೀಕರಿಗೆ ದೊಡ್ಡ ಮಟ್ಟದ ನೆರವು ದೊರೆಯಲಿದೆ.



