ಬೆಂಗಳೂರು : ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದ್ದು ಆಕ್ರೋಶಗೊಂಡ ವಿದ್ಯಾರ್ಥಿ ಪೋಷಕರು ದೈಹಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿಯ ಸ್ಟ್ರಲಿಂಗ್ ಇಂಗ್ಲೀಷ್ ವಸತಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಗುರು ಕಿರಣ್ ಎಂಬ ವಿದ್ಯಾರ್ಥಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿಸಿರೋದಾಗಿ ವಿದ್ಯಾರ್ಥಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ, ಪೋಷಕರು ಬರುವಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ನಡುವೆ ದೈಹಿಕ ಶಿಕ್ಷಕ ನಾರಾಯಣ ಹಲ್ಲೆ ಮಾಡಿದ್ದಕ್ಕೆ ಗುರುಕಿರಣ್ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ಇದರಿಂದ ಆಕ್ರೋಶಗೊಂಡ ಪೋಷಕರು, ದೈಹಿಕ ಶಿಕ್ಷಕ ನಾರಾಯಣ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಾರಾಯಣನನ್ನು ಸುಟ್ಟು ಹಾಕುವುದಾಗಿ ಪೆಟ್ರೋಲ್ ತಂದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಬಳಿಕ ಬಾಗಲೂರು ಪೊಲೀಸರು ಆಗಮಿಸಿ, ದೈಹಿಕ ಶಿಕ್ಷಕ ನಾರಾಯಣರನ್ನು ರಕ್ಷಿಸಿದ್ದು ಪೊಲೀಸರ ಎದುರೇ ಪೋಷಕರು ಮತ್ತೆ ದೈಹಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. ನಂತರ ಪೊಲೀಸರು ವಿದ್ಯಾರ್ಥಿ ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾದರು.



