ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸ್ಕ್ಯಾನಿಂಗ್ ಇಲ್ಲ, ಬಾಕಿ ಬಿಲ್ ಬಿಡುಗಡೆಯೂ ಇಲ್ಲ, ಈಗ ಒಪಿಡಿಗೂ ಬೀಗ ಬೀಳುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರಿ ಆಸ್ಪತ್ರೆಗಳು ಕೋಮಾಗೆ ಜಾರುವ ಮುನ್ನ ವೈದ್ಯರ ಬೇಡಿಕೆ ಈಡೇರಿಸಿ ಬಡರೋಗಿಗಳಿಗೆ ಅನುಕೂಲ ಕಲ್ಪಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಆಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಆರೋಗ್ಯ ಸಚಿವರು ಅಸಮರ್ಥರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಕಾಂಗ್ರೆಸ್ ಸಿಎಂ ಒಪ್ಪದ ಬ್ರ್ಯಾಂಡ್ ಬೆಂಗಳೂರು : ಬ್ರ್ಯಾಂಡ್, ಗ್ರೇಟರ್ ಮಾಡಲು ಹೋಗಿ ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿಯನ್ನು ಬ್ಲ್ಯಾಕ್ ಲಿಸ್ಟ್ ಮಾಡಿದ್ದೇ ನಿಮ ದೊಡ್ಡ ಸಾಧನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಶೋಕ್ ಟೀಕಿಸಿದ್ದಾರೆ.
ಅಲ್ಲದೆ ಗುಂಡಿ ಬಿದ್ದ ರಸ್ತೆಗಳು ಮತ್ತು ಕಸದ ರಾಶಿಗಳೇ ನಿಮ್ಮ ಜಾಗತಿಕ ಮಟ್ಟದ ಯೋಜನೆಗಳೇ ಎಂದು ಪ್ರಶ್ನಿಸಿದ್ದಾರೆ. ಹೈದ್ರಾಬಾದ್ ಎದುರು ಬೆಂಗಳೂರಿನ ಟ್ರಾಫಿಕ್ ಮತ್ತು ಮಾಲಿನ್ಯವನ್ನು ನಿಮ್ಮದೇ ತೆಲಂಗಾಣದ ಮುಖ್ಯಮಂತ್ರಿ ರೇವಂತ್ರೆಡ್ಡಿ ಬಹಿರಂಗವಾಗಿ ಲೇವಡಿ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರನ್ನು ಪಾರ್ಟ್ಟೈಮ್ ಬೆಂಗಳೂರು ಅಭಿವೃದ್ಧಿ ಸಚಿವರು ಎಂದು ವ್ಯಂಗ್ಯವಾಡಿದ್ದಾರೆ.



