ಗದಗ : ದೇಶದ ಗಮನ ಸೆಳೆದಿದ್ದ ತಾಲೂಕಿನ ಲಕ್ಕುಂಡಿಯಲ್ಲಿ ದೊರೆತಿದ್ದ ಚಿನ್ನವು 470 ಗ್ರಾಂ ಇದ್ದು, ವಿಜಯನಗರ ಕಾಲದ ಆಭರಣ ಸಾಧ್ಯತೆ ಎಂದು ಲಕ್ಕುಂಡಿ ಚಿನ್ನದ ನಿಧಿ ಕುರಿತು ಪರಿಶೀಲನೆ ನಡೆಸಿದ ತಜ್ಞ ಸಮಿತಿಯ ಅಧ್ಯಕ್ಷ ಡಾ.ಎಂ.ಎಸ್.ಕೃಷ್ಣಮೂರ್ತಿ ಹೇಳಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಭವನದಲ್ಲಿ ನಿಧಿ ಕಾಲಾವಧಿ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಿಧಿಯ ಆಕಾರ, ವಿನ್ಯಾಸ, ರೂಪುರೇಷೆ ಹಾಗೂ ಶಿಲ್ಪ ಆಭರಣಗಳ ಕಲಾತ್ಮಕ ವಿನ್ಯಾಸಗಳ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಈ ಚಿನ್ನದ ನಿಧಿ ಸುಮಾರು 500ರಿಂದ 600 ವರ್ಷಗಳ ಹಿಂದಿನ ವಿಜಯನಗರ ಕಾಲದ ಅರಸರ ಅವಧಿಯ ಆಭರಣಗಳು ಇರಬಹುದು ಎಂದಿದ್ದಾರೆ.
ಇನ್ನೂ ಪತ್ತೆಯಾದ ಆಭರಣಗಳು ಕಂಚಿನ ದೇವತೆಯ ಅಲಂಕಾರದ ಆಭರಣಗಳಾಗಿದ್ದು, ಸಿಂಹ ಮತ್ತು ಕೀರ್ತಿಮುಖದ ಆಕೃತಿ ಜತೆಗೆ ನೀಲಮಣಿ, ಮುತ್ತು, ಪಚ್ಚೆ, ಹವಳ ಹಾಗೂ ಹರಳುಗಳನ್ನು ಅಲಂಕಾರಿಕ ಚಿನ್ನಾಭರಣಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಹೆಣ್ಣು ದೇವರ ಮೂರ್ತಿಗಳಿಗೆ ಅಲಂಕರಿಸಲು ಬಳಸಿದ ಆಭರಣಗಳು ಇರಬಹುದು. ಕಿವಿಯೋಲೆಗಳು, ನಾಗರಹೆಡೆ ಮಾದರಿಯ ಆಭರಣಗಳು ಹಾಗೂ ಸೂಕ್ಷ್ಮ ಕೆತ್ತನೆಗಳು ಆಭರಣಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ ಎಂದರು.
ಈ ಚಿನ್ನದ ಆಭರಣಗಳ ಇಂದಿನ ಬಂಗಾರದ ಮೌಲ್ಯ ಸುಮಾರು ₹80 ಲಕ್ಷ ಆಗಬಹುದು. ಆದರೆ ಇವು ಅಪರೂಪದ ಪುರಾತನ ಆಭರಣಗಳಾಗಿರುವುದರಿಂದ ಅದರ ನಿಖರ ಮೌಲ್ಯ ಈಗಿನ ಮೌಲ್ಯಕ್ಕಿಂತ 10 ಪಟ್ಟು ಅಧಿಕ ಆಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಡಾ.ಎಂ.ಎಸ್.ಕೃಷ್ಣಮೂರ್ತಿ, ಡಾ.ರಾಘವೇಂದ್ರರಾವ್ ಕುಲಕರ್ಣಿ, ಪ್ರೊ.ಚೂಡಾಮಣಿ ನಂದಗೋಪಾಲ, ಹನುಮಾಕ್ಷಿ ಗೋಗಿ, ಪ್ರಭು ಕಮ್ಮಾರ, ಡಾ.ಆರ್.ಶೈಜೇಶ್ವರ ಹಾಗೂ ತಜ್ಞರ ಡಿಸಿ ಸಿ.ಎನ್.ಶ್ರೀಧರ್, ಎಸಿ.ಗಂಗಪ್ಪ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಲಕ್ಕುಂಡಿ ಪ್ರಾಧಿಕಾರ ಆಯುಕ್ತ ಶರಣು ಗೊಗೇರಿ, ಸದಸ್ಯ ಸಿದ್ದು ಪಾಟೀಲ ಸೇರಿದಂತೆ ಇತರರು ಇದ್ದರು.



