ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ವಿರುದ್ದ ಅಲ್ಪಸಂಖ್ಯಾತ ನಾಯಕರು ಸಮರ ಸಾರಿದ್ದು, ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿರುವ 23 ಮಂದಿ ಮುಸ್ಲಿಮ್ ನಾಯಕರು ತಾವೇ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನಮಗೆ ನಮ್ಮ ಸಮುದಾಯ ನಾಯಕರಿಗೆ ನೀಡಬೇಕೆಂದು ಮುಸ್ಲಿಮ್ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಮರ ಬೇಡಿಕೆಗೆ ಸ್ಪಂದಿಸದೇ ಎಸ್.ಎಸ್.ಮಲ್ಲಿಕಾರ್ಜುನ್ ಪುತ್ರ ಸಮರ್ಥ್ಗೆ ಟಿಕೆಟ್ ನೀಡಿತ್ತು.
ಅಧಿಕೃತವಾಗಿ ಈ ವಿಚಾರ ಪ್ರಕಟಗೊಂಡ ನಂತರ ನಮ್ಮ ಸಮುದಾಯದಿಂದ 100ಕ್ಕೂ ಹೆಚ್ಚು ನಾಮಪತ್ರ ಸಲ್ಲಿಸಬೇಕು ಎಂದು ಮುಸ್ಲಿಮರು ಕರೆ ನೀಡಿದ ಬೆನ್ನಲ್ಲೇ ಇಂದು 23 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಸಾವಿರಾರು ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದಿಲ್ಲ. ಕೊನೆ ಕ್ಷಣಗಳವರೆಗೆ ನಮಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸ ಇತ್ತು. ಆದರೆ ನಮಗೆ ಟಿಕೇಟ್ ಸಿಗದ್ದಕ್ಕೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಮನೂರು ಶಿವಶಂಕರಪ್ಪನವರು ನಮಗೆ ಗುರುಗಳು ನಾನು ಶಿಷ್ಯ. ಅವರಿಗಾಗಿ ದುಡಿದುಕೊಂಡು ಬಂದಿದ್ದೇವೆ. ಅವರ ಮಾರ್ಗದರ್ಶನದಲ್ಲೇ ಚುನಾವಣೆ ಮಾಡಿಕೊಂಡು ಬಂದಿದ್ದು ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.



