ʻಕಾಂತಾರಾʼ ಚಾಮುಂಡಿ ದೈವ ಪಾತ್ರದ ಬಗ್ಗೆ ಅಪಮಾನ ಪ್ರಕರಣದಲ್ಲಿ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿರೋ ಬಾಲಿವುಡ್ ನಟ ರಣವೀರ್ ಸಿಂಗ್, ಇದೀಗ ದೇವರ ಸಮ್ಮುಖದಲ್ಲೇ ಕ್ಷಮೆ ಕೋರಲು ಮುಂದಾಗಿದ್ದಾರೆ.
ಇವತ್ತು ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ರಣವೀರ್ ಸಿಂಗ್ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ಚಾಮುಂಡಿ ದೇವಾಲಯಕ್ಕೂ ಭೇಟಿ ನೀಡಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು. ನೈಜ ಪಶ್ಚಾತ್ತಾಪವಿರಬೇಕೆಂದು ದೂರುದಾರ ಪ್ರಶಾಂತ್ ಮೆತಾಲ್ ವಾದಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಣವೀರ್ ಸಿಂಗ್ ಪರ ವಕೀಲರು, ರಣವೀರ್ ಸಿಂಗ್ ಈಗಾಗಲೇ ಎಕ್ಸ್ನಲ್ಲಿ ಕ್ಷಮೆ ಕೇಳಿದ್ದಾರೆ. ದೇವಾಲಯಕ್ಕೂ ಭೇಟಿ ನೀಡುತ್ತಾರೆ, ಕ್ಷಮೆ ಕೇಳುತ್ತಾರೆ. ಕೋರ್ಟ್ಗೂ ಕ್ಷಮಾಪಣೆ ಪ್ರಮಾಣಪತ್ರ ಸಲ್ಲಿಸುತ್ತಾರೆ ಅಂತ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಏಪ್ರಿಲ್ 10 ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಗೋವಾ ಫಿಲ್ಮೋತ್ಸವ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ನಟ ರಿಷಬ್ ಶೆಟ್ಟಿ ಮುಂದೆಯೇ ಮಾತನಾಡಿದ್ದರು. ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ರಣವೀರ್ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು.



