ಬೆಂಗಳೂರು : ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹೊರತಾಗಿಯೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮಿಜಿಯವರ 119 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಶಾಂತಿ, ಸುಖ-ಸಮೃದ್ಧಿ ಮತ್ತು ಸಂಸ್ಕೃತಿಗೆ ಸ್ವಾಮೀಜಿಗಳ ಕೊಡುಗೆ ಕಾರಣ. ವಿಶ್ವದಾದ್ಯಂತ ಅಶಾಂತಿ, ಸಂಘರ್ಷಗಳು ನಡೆದರೂ, ಭಾರತದಲ್ಲಿ ಇಂತಹ ಸಮಸ್ಯೆಗಳು ಕಾಣಿಸಲಿಲ್ಲ. ಇಂಧನ ಬೆಲೆ ಸಂಬಂಧಿ ಕೆಲವು ಸಮಸ್ಯೆಗಳಿದ್ದರೂ, ದೇಶದಲ್ಲಿ ಧರ್ಮ ಮತ್ತು ಶಾಂತಿ ಅಕ್ಷಯವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ ಜೋಶಿ ಅವರು, ಗಂಗಾ ನದಿ ಪಾಪಗಳನ್ನು ಹೇಗೆ ತೊಳೆಯುತ್ತದೆಯೋ ಅದೇ ರೀತಿ ಸಿದ್ಧಗಂಗಾ ಮಠವು ಲಕ್ಷಾಂತರ ಜನರ ಬಡತನದ ಕತ್ತಲೆಯನ್ನು ಹೋಗಲಾಡಿಸುತ್ತದೆ. ರಾಜಕಾರಣಿಗಳು ದೇಶವನ್ನು ಆಳಬಹುದು. ಆದರೆ, ಶ್ರೀ ಶಿವಕುಮಾರ ಸ್ವಾಮೀಜಿಯವರು ಸಮಾಜವನ್ನು ಮತ್ತು ಜನರನ್ನು ಪ್ರಗತಿಯತ್ತ ಮುನ್ನಡೆಸುತ್ತಾರೆ ಎಂದು ಶ್ಲಾಘಿಸಿದರು.



